– ದೀಪೋತ್ಸವ, ರಾಮಾಯಣದ ಪ್ರಸಂಗ ಪ್ರದರ್ಶನ
ಲಕ್ನೋ: ಈ ಬಾರಿ ಗಣರಾಜ್ಯೋತ್ಸವದ ಪರೇಡ್ಗೆ ಉತ್ತರ ಪ್ರದೇಶ ವಿಶೇಷ ರೀತಿಯ ಟ್ಯಾಬ್ಲೋ ಸಿದ್ಧಪಡಿಸುತ್ತಿದ್ದು, ಅಯೋಧ್ಯೆ ಹಾಗೂ ರಾಮ ಮಂದಿರದ ಮಾದರಿಯನ್ನು ಪ್ರದರ್ಶಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಂಪೂರ್ಣ ಅಯೋಧ್ಯೆ ಚಿತ್ರಣ, ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮಾದರಿ ಹಾಗೂ ದೀಪಾವಳಿ ವೇಳೆ ನಡೆದ ದೀಪೋತ್ಸವವನ್ನು ಪ್ರದರ್ಶಿಸಲಿದೆ. ಉತ್ತರ ಪ್ರದೇಶ ಸರ್ಕಾರ ಇದಕ್ಕಾಗಿ ಸಂಪೂರ್ಣ ಸಿದ್ಧತೆ ನಡೆಸಿದ್ದು, ಅಯೋಧ್ಯೆಯ ರಾಮಮಂದಿರದ ಮಾದರಿ ಸಹ ಟ್ಯಾಬ್ಲೋದ ಭಾಗವಾಗಲಿದೆ. ಅಲ್ಲದೆ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ನಡೆದ ದೀಪೋತ್ಸವದ ಚಿತ್ರಣವನ್ನು ಸಹ ಟ್ಯಾಬ್ಲೋ ಒಳಗೊಂಡಿರುತ್ತದೆ.
ದೀಪಾವಳಿಯ ದೀಪೋತ್ಸವದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ದೀಪ ಬೆಳಗಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಭಾಗವಹಿಸಿದ್ದರು. ಈ ದೀಪೋತ್ಸವದ ಚಿತ್ರಣವನ್ನು ಸಹ ಟ್ಯಾಬ್ಲೋ ಒಳಗೊಂಡಿರುತ್ತದೆ.
ಕೇವಲ ರಾಮ ಮಂದಿರ, ದೀಪೋತ್ಸವ, ಅಯೋಧ್ಯೆ ಮಾತ್ರವಲ್ಲ ಸಾಮಾಜಿಕ ಸಾಮರಸ್ಯದ ಅಂಶಗಳು ಹಾಗೂ ರಾಮಾಯಣದ ದೃಶ್ಯಗಳನ್ನು ಅಯೋಧ್ಯೆಯ ಟ್ಯಾಬ್ಲೋಗೆ ಸೇರಿಸಲು ಚಿಂತಿಸಲಾಗಿದೆ.