ಉಡುಪಿ: ಗಣರಾಜ್ಯೋತ್ಸವ ಸಂದರ್ಭದಲ್ಲಿ ಮೂರೂವರೆ ವರ್ಷದ ಕಂದಮ್ಮ ಸೇನೆಯ ಸಮವಸ್ತ್ರ ಧರಿಸಿ ಮಷಿನ್ ಗನ್ ಹಿಡಿದು ಎಲ್ಲರನವನ್ನು ಸೆಳೆಯುತ್ತಿರುವ ದೃಶ್ಯ ಉಡುಪಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕಂಡು ಬಂದಿದೆ.
ಜಿಲ್ಲಾಡಳಿತ ವತಿಯಿಂದ 72ನೇ ಗಣರಾಜ್ಯೋತ್ಸವ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಚರಿಸಲ್ಪಟ್ಟಿತು. ಮೀನುಗಾರಿಕೆ ಬಂದರು ಸಚಿವ ಅಂಗಾರ ಧ್ವಜಾರೋಹಣ ಮಾಡಿದರು. ಇಡೀ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ಸೆಕ್ಯೂರಿಟಿ ಕೊಟ್ಟಂತೆ ಮೂರೂವರೆ ವರ್ಷದ ಬಾಲೆ ಮಷಿನ್ ಗನ್ ಹಿಡಿದು ಓಡಾಡಿದ್ದು ವಿಶೇಷವಾಗಿ ಕಂಡು ಬಂದಿದೆ.
ಎಲ್ಲರ ಗಮನವನ್ನು ತನ್ನತ್ತ ಸೆಳೆದಿರುವ ಬಾಲಕಿ ಮಯೂರಿ ಪ್ರಭು. ಆರ್ಮಿಯ ಯೂನಿಫಾರ್ಮ್ನಲ್ಲಿ ಬಂದಿದ್ದ ಮಯೂರಿ, ಕೈಯಲ್ಲಿ ಮಷಿನ್ ಗನ್ ಹಿಡಿದು ಸಭಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲೇ ಓಡಾಡಿದಳು. ಧ್ವಜಾರೋಹಣ, ಪಥಸಂಚಲನ, ಸಭೆ ಸನ್ಮಾನ ಸಂದರ್ಭ ಮೈದಾನದಲ್ಲಿ ನಿಂತು ಎಲ್ಲವನ್ನೂ ವೀಕ್ಷಿಸಿದಳು.
ಮಯೂರಿ ತಂದೆ ರಾಘವೇಂದ್ರ ಪ್ರಭು ಉಡುಪಿ ಫೋಸ್ಟ್ ಆಫೀಸಿನಲ್ಲಿ ಫೋಸ್ಟ್ ಮ್ಯಾನ್. ತಾಯಿ ಶ್ರೀದೇವಿ ಗೃಹಿಣಿ. ನನಗೆ ಪೊಲೀಸ್ ಆಗಬೇಕು ಎಂದು ಹೇಳುವ ಮಯೂರಿಗೆ ಪೋಷಕರು ರಾಷ್ಟ್ರೀಯ ಹಬ್ಬ ಬಂದಾಗ ವಿಶೇಷವಾದ ವೇಷವಾದ ಉಡುಪನ್ನು ಧರಿಸಿ ಖುಷಿಪಡುತ್ತಾರೆ. ಗಣರಾಜ್ಯೋತ್ಸವಕ್ಕೆ ಮಯೂರಿ ಪೋಷಕರು ಮಿಲಿಟರಿಯ ಯೂನಿಫಾರ್ಮ್ ಶಸ್ತ್ರಾಸ್ತ್ರ ಕೊಡಿಸಿದ್ದಾರೆ. ಆರ್ಮಿ ಕ್ಯಾಪ್ ಧರಿಸಿ ಮಯೂರಿ ಉಡುಪಿ ಜಿಲ್ಲಾಡಳಿತದ ಕಾರ್ಯಕ್ರಮದಲ್ಲಿ ಮಿಂಚಿದ್ದಾಳೆ.
ಸಚಿವ ಎಸ್ ಅಂಗಾರ, ಜಿಲ್ಲಾಧಿಕಾರಿ ಜಿ ಜಗದೀಶ್ ಜೊತೆ ಮಯೂರಿ ಫೋಟೋಸ್ ತೆಗೆಸಿಕೊಂಡಿದ್ದಾಳೆ. ಡಿಸಿ ಜಿ ಜಗದೀಶ್ ಮಯೂರಿಯನ್ನು ಎತ್ತಿಕೊಂಡು ನೀನು ಸೆಕ್ಯೂರಿಟಿ ಮುಂದೆ ಕೊಡುವಿಯಂತೆ, ಸದ್ಯ ನಾನು ನಿನಗೆ ಭದ್ರತೆ ಕೊಡುತ್ತೇನೆ ಎಂದು ಎತ್ತಿಕೊಂಡರು. ಸಚಿವ ಅಂಗಾರ ಶುಭ ಹಾರೈಸಿದರು. ನಾನು ಮುಂದೆ ಪೊಲೀಸ್ ಆಗುತ್ತೇನೆ ಎಂದು ಎಲ್ಲರ ಜೊತೆ ಹೇಳಿಕೊಂಡಿರುವ ಪುಟ್ಟ ಬಾಲಕಿ ಎಲ್ಲರ ಗಮನವನ್ನು ಸೆಳೆದಿದ್ದಾಳೆ.