ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ನರಸೀಪುರ ಗ್ರಾಮದ ಖ್ಯಾತ ನಾಟಿ ವೈದ್ಯ ನಾರಾಯಣಮೂರ್ತಿ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತ ನಾರಾಯಣಮೂರ್ತಿ ಅವರಿಗೆ 80 ವರ್ಷ ವಯಸ್ಸಾಗಿತ್ತು. ತಡ ರಾತ್ರಿ ಮನೆಯಲ್ಲಿ ಇದ್ದ ವೇಳೆ ನಾರಾಯಣಮೂರ್ತಿ ಅವರಿಗೆ ಹೃದಯಾಘಾತವಾಗಿದೆ. ಈ ವೇಳೆ ಕುಟುಂಬಸ್ಥರು ತಕ್ಷಣವೇ ಸಾಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ನಾರಾಯಣಮೂರ್ತಿ ಅವರು ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ಸೇರಿದಂತೆ ಇನ್ನಿತರೆ ಕಾಯಿಲೆಗಳಿಗೆ ನಾಟಿ ಔಷಧಿ ನೀಡುತ್ತಿದ್ದರು.
ಇವರಿಂದ ಔಷಧಿ ಪಡೆದ ಕೆಲವರು ಕಾಯಿಲೆಯಿಂದ ಗುಣಮುಖರಾಗಿದ್ದರು. ಹೀಗಾಗಿ ಇವರ ಬಳಿ ಔಷಧಿ ಪಡೆಯಲು ದೇಶದ ವಿವಿಧೆಡೆಗಳಿಂದ ಪ್ರತಿದಿನ ಸಾವಿರಾರು ಮಂದಿ ಆಗಮಿಸಿ ಔಷಧಿ ಪಡೆಯುತ್ತಿದ್ದರು. ಲಕ್ಷಾಂತರ ಮಂದಿ ರೋಗಿಗಳಿಗೆ ಔಷಧಿ ನೀಡಿರುವ ನಾರಾಯಣಮೂರ್ತಿ ಅವರು ರೋಗಿಗಳ ಪಾಲಿಗೆ ದೈವ ಸ್ವರೂಪದಂತಿದ್ದರು. ಇದೀಗ ನಾಟಿ ವೈದ್ಯ ಮೃತಪಟ್ಟಿರುವುದು ರೋಗಿಗಳ ಪಾಲಿಗೆ ತುಂಬಲಾರದ ನಷ್ಟವಾಗಿದೆ.