ಬೆಂಗಳೂರು: ಸರ್ಕಾರ ಹಾಗೂ ಖಾಸಗಿ ಶಾಲೆಗಳ ಶುಲ್ಕ ಗಲಾಟೆ ವಿಚಾರ ಸಿಎಂ ಅಂಗಳಕ್ಕೆ ತಲುಪಿದೆ. ಖಾಸಗಿ ಶಾಲೆಗಳ ಶುಲ್ಕ ಟಾರ್ಚರ್ ಗೆ ಬ್ರೇಕ್ ಹಾಕುವಂತೆ ಸಿಎಂ ಯಡಿಯೂರಪ್ಪಗೆ ಪೋಷಕ ಸಂಘಟನೆಗಳು ಮನವಿ ಸಲ್ಲಿಸಿವೆ. ಈ ವರ್ಷವೂ ಶೇ.70 ಶುಲ್ಕ ಪಡೆಯಲು ಖಾಸಗಿ ಶಾಲೆಗಳಿಗೆ ಆದೇಶ ಹೊರಡಿಸಬೇಕು ಅಂತ ಸಿಎಂ ಯಡಿಯೂರಪ್ಪಗೆ ಕರ್ನಾಟಕ ರಾಜ್ಯ ಖಾಸಗೀ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ಮನವಿ ಮಾಡಿದೆ.
ಗೃಹ ಕಚೇರಿ ಕೃಷ್ಣದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ ಸಮಿತಿ ಸದಸ್ಯರು, ಸರ್ಕಾರ ಕೂಡಲೇ ಮದ್ಯೆ ಪ್ರವೇಶ ಮಾಡಿ ಶುಲ್ಕ ಗೊಂದಲ ನಿವಾರಿಸುವಂತೆ ಮನವಿ ಮಾಡಿದೆ. ಅಷ್ಟೆ ಅಲ್ಲದೆ 7 ಅಂಶಗಳ ಸರ್ಕಾರ ಕೂಡಲೇ ಜಾರಿಗೆ ತರಬೇಕು ಅಂತ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಪೋಷಕ ಸಂಘಟನೆಗಳ ಬೇಡಿಕೆಗಳು:
ಆರ್.ಟಿ.ಇ ಅಡಿ ಒಂದು ವಿದ್ಯಾರ್ಥಿಗೆ ಸರ್ಕಾರ 16 ಸಾವಿರ ಶುಲ್ಕ ಖಾಸಗಿ ಶಾಲೆಗಳಿಗೆ ನೀಡುತ್ತಿದೆ. ಇದೇ ಶುಲ್ಕವನ್ನ ಖಾಸಗಿ ಶಾಲೆಗಳಿಗೂ ಪಡೆಯಬೇಕು ಅಂತ ಅಧಿಕೃತ ಆದೇಶ ಹೊರಡಿಸಬೇಕು.ಕಳೆದ ವರ್ಷದಂತೆ ಶೇ.70 ಬೋಧನಾ ಶುಲ್ಕ ಮಾತ್ರ ಈ ವರ್ಷ ಪಡೆಯುವಂತೆ ಆದೇಶ ಹೊರಡಿಸಬೇಕು. ಸರ್ಕಾರದ ಆದೇಶವನ್ನು ಪಾಲಿಸಿ, ನಿರ್ಧರಿಸಿದ ಆಧಿಕೃತ ಶುಲ್ಕವನ್ನು ಪಡೆದು ಶಾಲೆ ನಡೆಸೋದು ಕಷ್ಟ ಎಂದು ಹೇಳುವ ಕುಂದುಕೊರತೆಗಳನ್ನು ಮಾನ್ಯ ಮಾಡಿ ಅಂತಹ ಶಾಲೆಗಳಲ್ಲಿ ಪೇರೆಂಟ್ ಮತ್ತು ಟೀಚರ್ಸ್ ಅಸೋಸಿಯೇಷನ್ ರಚಿಸಿ ಅ ಶಾಲೆಗಳನ್ನು ನಡೆಸಲು ಅ ಸಂಘಗಳಿಗೆ ಅವಕಾಶ ಕೊಡಬೇಕು.
ಆರ್.ಟಿ.ಇ ನಿಯಮದ ಪ್ರಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಷಕರು- ಶಿಕ್ಷಕರ ಮಂಡಳಿ ರಚನೆ ಮಾಡಬೇಕು. ಈ ಮಂಡಳಿ ಆಯಾ ವರ್ಷಗಳ ಖರ್ಚು ವೆಚ್ಚ ಪರಿಶೀಲನೆ ಮಾಡಿ ಶುಲ್ಕ ನಿಗಧಿ ಮಾಡಬೇಕು. ಮಂಡಳಿ ನಿರ್ಧಾರ ಶಾಲಾ ವೆಬ್ ಸೈಟ್ ಮತ್ತು ಶಾಲಾ ಬೋರ್ಡ್ ನಲ್ಲಿ ಹಾಕಬೇಕು.ಶುಲ್ಕ ನಿಗಧಿ ಸಂಬಂಧ ತಮಿಳುನಾಡು, ಮಹಾರಾಷ್ಟ್ರ,ರಾಜಸ್ಥಾನ ಮಾದರಿಯಲ್ಲಿ ಶುಲ್ಕ ನಿಗಧಿ ಸಮಿತಿ ರಚಿಸಬೇಕು.ಶಾಲೆಗಳು ಶುಲ್ಕ ವಿಚಾರಕ್ಕೆ ವಿದ್ಯಾರ್ಥಿಯ ಮೇಲೆ ಕ್ರಮ ಕೈಗೊಂಡರೆ ಅಂತ ಶಾಲೆಗಳ ಮಾನ್ಯತೆಯನ್ನ 24 ಗಂಟೆ ಒಳಗೆ ರದ್ದು ಮಾಡಲು ಸರ್ಕಾರ ಆದೇಶ ಹೊರಡಿಸಿಬೇಕು ಅಂತ ಸರ್ಕಾರವನ್ನ ಒತ್ತಾಯಿಸಿದ್ದಾರೆ.