ಕಲಬುರಗಿ: ಕೊರೊನಾ ಪರಿಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಹಲವು ರೋಗಿಗಳು ಪರದಾಡುತ್ತಿದ್ದಾರೆ. ಹೀಗಿರುವಾಗ ಸರ್ಕಾರಿ ಆಸ್ಪತ್ರೆಯ ಎಲುಬು ಮತ್ತು ಕಿಲು ತಜ್ಞ ಡಾ.ಸಂಗಮೇಶ್ ಟಕ್ಕಳಕಿ ತಮ್ಮ ಕೆಲಸಕ್ಕೆ ಹಾಜರಾಗದೆ, ಅಫಜಲಪುರ ಪಟ್ಟಣದ ಖಾಸಗಿ ಕ್ಲಿನಿಕ್ನಲ್ಲಿ ಕಾರ್ಯ ನಿರ್ವಹಿಸುವಾಗ ತಹಶೀಲ್ದಾರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾರೆ.
ಮೇ 25ರಿಂದ ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಡಾ.ಸಂಗಮೇಶ್ ಗೈರಾಗಿದ್ದರು, ಈ ಸಂಬಂಧ ಮೇಲಾಧಿಕಾರಿಗಳು ದೂರವಾಣಿ ಕರೆ ಮಾಡಿದ್ದರೂ ಕರೆಯನ್ನು ಸ್ವೀಕರಿಸಿರಲಿಲ್ಲ. ವೈದ್ಯ ಕರೆ ಸ್ವೀಕರಿಸದೇ ಇದ್ದಾಗ ಅನುಮಾನಗೊಂಡ ತಾಲೂಕು ಆಸ್ಪತ್ರೆಯವರು, ಸೋಮವಾರ ಸಂಜೆ ಅಫಜಲಪುರ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮತ್ತು ತಾಲೂಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸುಶೀಲ್ ಕುಮಾರ್ ನೇತೃತ್ವದಲ್ಲಿ ಡಾ.ಸಂಗಮೇಶ್ ಟಕ್ಕಳಕಿ ನಡೆಸುತ್ತಿದ್ದ ಸಂಗಮೇಶ್ವರ ಕ್ಲಿನಿಕ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಈ ವೇಳೆ ಡಾ.ಸಂಗಮೇಶ್ ಟಕ್ಕಳಕಿ ರೋಗಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾಗಲೇ ಅಧಿಅಕರಿಗಳ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಗೈರಾಗಿರುವ ಮತ್ತು ಖಾಸಗಿ ಕ್ಲಿನಿಕ್ನಲ್ಲಿ ಕರ್ತವ್ಯ ನಿರ್ವಸುತ್ತಿದ್ದ ಸಂಬಂಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.