– ಅಣ್ಣಾಮಲೈ ಉಪವಾಸ ಮಾಡಿದ್ರೆ ನಮಗೆ ಸಂಬಂಧವಿಲ್ಲ
– ಮೇಕೆದಾಟು ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ
ಶಿವಮೊಗ್ಗ: ನೂತನ ಸಚಿವರಿಗೆ ಮುಖ್ಯಮಂತ್ರಿ ಅವರು ಈಗಾಗಲೇ ಖಾತೆ ಹಂಚಿಕೆ ಮಾಡಿದ್ದಾರೆ. ಆದರೆ ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜ್ ಅವರು ಮಾತ್ರ ತಮಗೆ ಬೇರೆ ಬೇರೆ ಖಾತೆ ಬೇಕು ಎಂದು ಕೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಅವರು ಇಬ್ಬರನ್ನು ಸಮಾಧಾನ ಪಡಿಸುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು ಖಾತೆ ಹಂಚಿಕೆಯಲ್ಲಿ ಆಗಲಿ, ಸಚಿವ ಸಂಪುಟದಲ್ಲಿ ಆಗಲಿ ಯಾವುದೇ ಗೊಂದಲವಿಲ್ಲ. ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜ್ ಅವರ ಭಾವನೆಗಳನ್ನು ತೋಡಿಕೊಂಡಿದ್ದಾರೆ ಅಷ್ಟೇ. ಅವರಿಬ್ಬರು ಮುಖ್ಯಮಂತ್ರಿ ಅವರ ಬಳಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತಾರೆ. ಇದರಲ್ಲಿ ಬಹಳ ವಿಶೇಷ ಏನು ಇಲ್ಲ ಎಂದರು.
ಇನ್ನು ಮೇಕೆದಾಟು ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಮಾತನಾಡಿದ ಸಚಿವರು ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ಅವರ ರಾಜಕಾರಣ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟಿನ ತೀರ್ಪಿನ ಅನುಸಾರ ಮೇಕೆದಾಟು ಯೋಜನೆ ಮಾಡಿಯೇ ಮಾಡುತ್ತೇವೆ. ಯಾವುದೇ ಕಾರಣಕ್ಕು ಮೇಕೆದಾಟು ಯೋಜನೆ ನಿಲ್ಲುವುದಿಲ್ಲ ಎಂದರು.
ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಉಪವಾಸ ಆದರೂ ಮಾಡಲಿ, ಏನಾದರೂ ಮಾಡಲಿ ಅದು ನಮಗೆ ಸಂಬಂಧವಿಲ್ಲ. ರಾಜಕಾರಣಿಯಾಗಿ ಅವರ ರಾಜ್ಯಕ್ಕೆ ಏನು ಬೇಕು ಅದನ್ನ ಅವರು ಯೋಚನೆ ಮಾಡುತ್ತಿದ್ದಾರೆ ಅದು ತಪ್ಪಲ್ಲ. ಅವರ ರಾಜ್ಯಕ್ಕೆ ಒಳ್ಳೆಯದಾಗುವ ದಿಕ್ಕಿನಲ್ಲಿ ಹೋರಾಟ ಮಾಡಿ, ಅಲ್ಲಿ ಪಕ್ಷವನ್ನು ಕಟ್ಟಿಕೊಳ್ಳಲಿ. ಅದರ ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆಯೂ ಅವರು ಗಮನ ಹರಿಸಲಿ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಳಿಕ ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿ ಆಗಿ ಆಶೀರ್ವಾದ ಪಡೆದಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿಗಳು, ಹಿರಿಯ ರಾಜಕಾರಣಿ, ರೈತ ನಾಯಕರು ಅಂತಾ ಭೇಟಿ ಆಗಿದ್ದಾರೆ ಹೊರತು ಜೆಡಿಎಸ್ ನಾಯಕರು ಅಂತ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾವು ಅಡ್ಜೆಸ್ಟ್ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್ಡಿಕೆ ತಿರುಗೇಟು
ಹಾಸನ ಅಂತಹ ಜಿಲ್ಲೆಯಲ್ಲಿ ದೇವೇಗೌಡರು, ರೇವಣ್ಣ ಹಾಗೂ ಕುಮಾರಸ್ವಾಮಿ ಅವರ ಶಕ್ತಿ ಮೀರಿ ಒಬ್ಬ ಸಾಮಾನ್ಯ ಕಾರ್ಯಕರ್ತ ಪ್ರೀತಂಗೌಡ ಶಾಸಕರಾಗಿದ್ದಾರೆ. ಹಾಸನದಲ್ಲಿ ಸಂಘಟನೆ ಕಟ್ಟಬೇಕು ಎಂಬ ಪ್ರಯತ್ನವನ್ನು ಸಹ ಪ್ರೀತಂಗೌಡ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರು ದೇವೇಗೌಡರ ಭೇಟಿ ಆಗಿದ್ದು ಸಮಾಧಾನ ತಂದಿಲ್ಲ ಎನಿಸುತ್ತದೆ ಎಂದರು. ಇದನ್ನೂ ಓದಿ: ಸಿಎಂಗೆ ಹೆಚ್ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು? ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ
ಸಿಎಂ ಬೊಮ್ಮಾಯಿ ಅವರು ದೇವೇಗೌಡರು ಜೆಡಿಎಸ್ ನಾಯಕರು ಎಂದು ಭೇಟಿ ಆಗಿಲ್ಲ. ಮಾಜಿ ಪ್ರಧಾನಿ ಎಂದು ಭೇಟಿ ಆಗಿದ್ದಾರೆ. ದೇವೇಗೌಡರು ಅವರ ಅಧಿಕಾರದ ಅವಧಿಯಲ್ಲಿ ಒಳ್ಳೆ ಒಳ್ಳೆಯ ಕೆಲಸ ಏನು ಮಾಡಿದ್ದರು, ಅದನ್ನ ಧಾರೆ ಎರೆಯಲಿ, ಆಶೀರ್ವಾದ ಎಂಬ ಉದ್ದೇಶದಿಂದ ಬೊಮ್ಮಾಯಿ ಭೇಟಿ ಆಗಿದ್ದಾರೆ ಎಂಬ ಮನವರಿಕೆಯನ್ನ ಪ್ರೀತಂಗೌಡರಿಗೆ ಮಾಡಿಸುತ್ತೇವೆ. ಜೊತೆಗೆ ಯಾವುದೇ ಕಾರಣಕ್ಕೂ ನಮ್ಮ ರಾಜಕಾರಣಕ್ಕೆ ಬಿಜೆಪಿ ಚಟುವಟಿಕೆಗೆ ಬೊಮ್ಮಾಯಿ, ದೇವೇಗೌಡರ ಭೇಟಿ ತೊಂದರೆ ಆಗುವುದಿಲ್ಲ ಎಂಬುದನ್ನು ಸಹ ತಿಳಿಸುತ್ತೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ಗೆ ಅನ್ನಪೂರ್ಣೇಶ್ವರಿ ಹೆಸರಿಟ್ರೇ ತಪ್ಪೇನು?- ಸುಧಾಕರ್ ಪ್ರಶ್ನೆ