– ಇಟ್ಟಿಗೆ, ಕಲ್ಲು, ಕಟ್ಟಿಗೆಗಳಿಂದ ಪೊಲೀಸ್ಗೆ ಥಳಿತ
ಯಾದಗಿರಿ: ಕ್ವಾರಂಟೈನ್ನಿಂದ ಹೊರ ಬಂದು ಊರಲ್ಲಿ ತಿರುಗುತ್ತಿದ್ದ ವ್ಯಕ್ತಿಗೆ ಬುದ್ಧಿವಾದ ಹೇಳಿದ ಪೊಲೀಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಪಿಕೆ ನಾಯಕ ತಾಂಡದಲ್ಲಿ ನಡೆದಿದೆ.
ಘಟನೆಯಲ್ಲಿ ಕೊಡೆಕಲ್ ಠಾಣೆಯ ಎಎಸ್ಐ ಭೀಮಾಶಂಕರ್ ಗೆ ಗಂಭೀರ ಗಾಯಗಳಾಗಿವೆ. ಮಹಾರಾಷ್ಟ್ರದಿಂದ ಬಂದ ಕಾರ್ಮಿಕ ವೆಂಕಟೇಶ್ ರಾಥೋಡ್ ಮತ್ತು ಆತನ ಕುಟುಂಬಸ್ಥರು ಎಎಸ್ಐ ಮೇಲೆ ಹಲ್ಲೆ ಮಾಡಿದ್ದಾರೆ. ಪಿಕೆ ತಾಂಡದ ಪ್ರೌಢಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲಾಗಿದ್ದು, ಮಹಾರಾಷ್ಟ್ರದಿಂದ ಬಂದ ಕಾರ್ಮಿಕರನ್ನು ಇಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ವೆಂಕಟೇಶ್ ಶಾಲೆಯ ಬೀಗ ಮುರಿದು ಹೊರಗಡೆ ಸುತ್ತಾಡುತ್ತಿದ್ದ. ಈ ವಿಷಯವನ್ನು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದರು.
ಪೊಲೀಸರು ಸ್ಥಳಕ್ಕೆ ತೆರಳಿ ವೆಂಕಟೇಶ್ ನಿಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. ಈ ವೇಳೆ ವೆಂಕಟೇಶನ ಕುಟುಂಬಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಈ ಸಮಯದಲ್ಲಿ ಕಲ್ಲು, ಕಟ್ಟಿಗೆಯಿಂದ ವೆಂಕಟೇಶ್ ಮತ್ತು ಕುಟುಂಬಸ್ಥರು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೊಡೆಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.