ಉಡುಪಿ: ಕೊರೊನಾ ಕಠಿಣ ನಿಯಮ ಮತ್ತು ಭಾರೀ ಮಳೆಯ ನಡುವೆ ಉಡುಪಿ ಶ್ರೀಕೃಷ್ಣನ ಉತ್ಸವ ನಡೆದಿದೆ. ಮಹೋತ್ಸವದಲ್ಲಿ ಪ್ರತಿವರ್ಷ ನೂರಾರು ವೇಷಗಳು ವಿಟ್ಲಪಿಂಡಿ ಮೆರುಗನ್ನು ಹೆಚ್ಚಿಸುತ್ತವೆ. ಆದರೆ ಈ ಬಾರಿ ಬೆರಳೆಣಿಕೆಯಲ್ಲಿ ಮಾತ್ರ ವೇಷಗಳು ಕಂಡುಬಂದವು.
ಉಡುಪಿಯ ರಾಮಾಂಜಿ ಕೋ-ವಿಧ ಎಂಬ ವಿಭಿನ್ನ ಸಂದೇಶ ಸಾರುವ ವೇಷವನ್ನು ಧರಿಸಿ ಗಮನ ಸೆಳೆದಿದ್ದಾರೆ. ಕೊರೊನಾ.. ಕೊರೋನ ಕಾಲ ಮತ್ತು ಕೊರೊನಾ ನಂತರ ಎಂಬ ಪರಿಕಲ್ಪನೆಯಲ್ಲಿ ವೇಷ ಮೂಡಿಬಂದಿತು. ಪ್ರತಿವರ್ಷ ವೇಷಹಾಕಿ ಧನಸಂಗ್ರಹ ಮಾಡಿ ಕಷ್ಟದಲ್ಲಿದ್ದವರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುತ್ತಿದ್ದರು.
ಎಂಟನೇ ವರ್ಷದ ಈ ವೇಷವನ್ನು ಹರಕೆ ರೂಪದಲ್ಲಿ ದೇವರಿಗೆ ಸಮರ್ಪಿಸಿದ್ದಾರೆ. ಜೊತೆಗೆ ಕೊರೊನಾ ಕಾಲದ ಸಂದೇಶವನ್ನು ರವಾನಿಸಿದ್ದಾರೆ. ಉಪನ್ಯಾಸಕ, ಕಲಾವಿದ ಪ್ರಶಾಂತ್ ಉದ್ಯಾವರ ಮತ್ತು ತಂಡ ಪ್ರತಿವರ್ಷದಂತೆ ಈ ಬಾರಿಯೂ ವಿಭಿನ್ನ ವಿನ್ಯಾಸದ ಮೂಲಕ ವೇಷವನ್ನು ಸೆಳೆಯುವಂತ ಮಾಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಲಾವಿದ ರಾಮಾಂಜಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾಳಜಿಯಿಂದ ಕಳೆದ ಎಂಟು ವರ್ಷಗಳಿಂದ ವೇಷ ಹಾಕಿದ್ದೇನೆ. ಒಟ್ಟುಗೂಡಿದ ಹಣದಿಂದ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದೇನೆ. ಈ ಬಾರಿ ಇಡೀ ದೇಶವೇ ಸಂಕಷ್ಟದಲ್ಲಿದೆ. ಈ ಕಾಲದಲ್ಲಿ ಜನರು ಆರ್ಥಿಕವಾಗಿ ಸದೃಢವಾಗಿಲ್ಲ. ಆದರೆ ಎಂಟು ವರ್ಷಗಳಿಂದ ಮಾಡಿಕೊಂಡು ಬಂದ ಕಲಾಸೇವೆ ಎಂಬ ತಪಸ್ಸನ್ನು ಈ ಬಾರಿ ಬಿಡುವ ಮನಸ್ಸಾಗಲಿಲ್ಲ. ಹರಕೆಯ ರೂಪದಲ್ಲಿ ವೇಷವನ್ನು ಧರಿಸಿದ್ದೇನೆ. ಸುಮಾರು ಹತ್ತು ಸಾವಿರ ರೂಪಾಯಿ ಖರ್ಚಾಗಿದೆ.
ವಿನ್ಯಾಸಕ ಪ್ರಶಾಂತ್ ಉದ್ಯಾವರ ಮಾತನಾಡಿ, ಕೊರೊನಾ ಸಾಂಕ್ರಾಮಿಕಕ್ಕೆ ಇಡೀ ಜಗತ್ತೇ ತತ್ತರಿಸಿದೆ. ಉಡುಪಿ ಜಿಲ್ಲೆಯ ದೊಡ್ಡ ಹಬ್ಬ ಕೃಷ್ಣಜನ್ಮಾಷ್ಟಮಿ ತಮ್ಮ ಘಮವನ್ನೇ ಕಳೆದುಕೊಂಡಿದೆ. ಈಗ ಕೊರೊನಾ ಅಟ್ಟಹಾಸ ತೋರುತ್ತಿದೆ. ಆದರೆ ಪರಿಸ್ಥಿತಿ ಹೀಗೆ ಇರುವುದಿಲ್ಲ. ಮಹಾಮಾರಿ ಪ್ಲೇಗ್ ಬಂದಾಗಲೂ ಜನರು ಸಾಕಷ್ಟು ಕಷ್ಟ ಪಟ್ಟಿದ್ದರು ಮುಂದೆ ಎಲ್ಲ ತೊಂದರೆಗಳು ನಿವಾರಣೆಯಾಗಲಿದೆ. ಇದನ್ನು ಕೋ- ವಿಧ ಎಂಬ ವೇಷದ ಮೂಲಕ ಜನತೆಯ ಮುಂದೆ ಇಟ್ಟಿದ್ದೇವೆ. ಕೊರೋನಾದ ನಂತರ ಒಂದು ಹೊಸ ಜಗತ್ತು ನಿರ್ಮಾಣ ಆಗುತ್ತದೆ ಇದನ್ನು ಕಲ್ಪಿಸಿ ವೇಷದ ವಿನ್ಯಾಸ ಮಾಡಿದ್ದೇವೆ ಎಂದು ಹೇಳಿದರು.