ಮಡಿಕೇರಿ: ಕೊರೊನಾ ಪಾಸಿಟಿವ್ ಬಂತು ಅಂದ್ರೆ ಸಾಕು ನಮ್ಮ ಕಥೆ ಮುಗಿದೇ ಹೋಯ್ತು ಎನ್ನೋ ತರ ಜನ ಯೋಚನೆ ಮಾಡ್ತಾರೆ. ಆದರೆ ಕೊರೊನಾದಿಂದ ಗುಣಮುಖರಾದ ಕೊಡಗು ಜಿಲ್ಲೆ ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯ ನಿವಾಸಿ ಮೋಹನ್ ಕುಮಾರ್ ಅವರು, ಕೊರೊನಾ ಬಂದರೆ ಹೆದರಿಕೊಳ್ಳಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಮೋಹನ್ ಕುಮಾರ್, ಕೊರೊನಾ ಅಂದರೆ ಮಾರಣಾಂತಿಕ ಕಾಯಿಲೆ ಏನೂ ಅಲ್ಲ. ಬದಲಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದು ಎಲ್ಲರಿಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ದೇಶದಲ್ಲಿ ಕೊರೊನಾ ಹರಡಲು ಆರಂಭವಾದ ದಿನಗಳಲ್ಲೇ ಮನೆಯವರಿಗೆ ಧೈರ್ಯ ತುಂಬಿದ್ದೆ. ಆದರೂ ನನಗೆ ಪಾಸಿಟಿವ್ ಅಂತ ಗೊತ್ತಾದಾಗ ಸ್ವಲ್ಪ ಅಳುಕು ಉಂಟಾಯಿತು. ಅದಕ್ಕಿಂತ ಮುಖ್ಯವಾಗಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ನನ್ನ ಸುತ್ತಮುತ್ತಲಿನ ಮನೆಯವರಿಗೆ ನಾನೊಬ್ಬ ಅಪರಾಧಿ ಎನ್ನುವ ರೀತಿ ಇತ್ತು. ಆ ಸ್ಥಿತಿ ಮಾತ್ರ ನನಗೆ ಬಹಳ ಬೇಸರವಾಯಿತು. ಇದು ಬದಲಾಗಬೇಕಾಗಿದೆ ಎನ್ನೋದು ಕೋವಿಡ್ ವೈರಸ್ ನಿಂದ ಗುಣಮುಖರಾಗಿರುವ ಮೋಹನ್ ರವರ ಬೇಸರದ ನುಡಿ.
ಕೊರೊನಾ ವೈರಸ್ ಅಟ್ಯಾಕ್ ಆದಲ್ಲಿ ಯಾವುದೇ ಆತಂಕ ಬೇಡ ಎಂದಿದ್ದಾರೆ. ಸಹಜವಾಗಿಯೇ ಜ್ವರ, ಶೀತ ಇರುವ ಹಾಗೆ ಇರುತ್ತದೆ. ನಾವು ಮನೆಯಲ್ಲಿ ಶುಚಿತ್ವದ ಕಡೆ ಗಮನ ಕೋಡಬೇಕು. ಮನೆಯವರಿಗೂ ನಾವು ಧೈರ್ಯ ತುಂಬುವ ಕೆಲಸ ಮಾಡಬೇಕು. ಹೀಗೆ ಅದರೆ ಮಾತ್ರ ಕೊರೊನಾ ವೈರಸ್ ನ ನಾವು ಓಡಸಬಹುದು. ಅಷ್ಟೇ ಅಲ್ಲದೆ ಜಿಲ್ಲಾಡಳಿತ ಆಸ್ಪತ್ರೆಗಳಲ್ಲಿ ಸಾಕಷ್ಟು ಶ್ರಮವಹಿಸಿ ಕಾರ್ಯಮಾಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 183 ಪಾಸಿಟಿವ್ ಪ್ರಕರಣಗಳು ಗುಣಮುಖವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಹೀಗಾಗಿ ಯಾರೂ ಭಯ ಪಡುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.