– ಸಚಿವ ನಿರಾಣಿ ಮನವಿಗೆ ಸ್ಪಂದಿಸಿದ ಉದ್ದಿಮೆದಾರರು
– ಅಗತ್ಯ ವೈದ್ಯಕೀಯ ಸೌಲಭ್ಯಕ್ಕೆ ಬಳಕೆ
ಕಲಬುರಗಿ: ಕೋವಿಡ್ -19 ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಬುರಗಿ ಜಿಲ್ಲೆಯ ಸೋಂಕಿತರ ವೈದ್ಯಕೀಯ ನೆರವು ನೀಡಲು ಸಿಮೆಂಟ್ ಉದ್ಯಮಿಗಳು 5 ಕೋಟಿ ಹಣವನ್ನು ದೇಣಿಗೆ ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ.
ಇಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು, ಜಿಲ್ಲೆಯ ಸಿಮೆಂಟ್ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಪ್ರಮುಖವಾಗಿ ಜಿಲ್ಲೆಯಲ್ಲಿ ಸೋಂಕಿನ ಸ್ಥಿತಿಗತಿ, ಸೋಂಕು ತಗಲಿರುವ ಪ್ರಮಾಣ, ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರು, ಹೋಂ ಕ್ವಾರೆಂಟೆನ್ ಗೆ ಒಳಗಾಗಿರುವವರು, ಆಕ್ಸಿಜನ್ ಪೂರೈಕೆ, ಐಸಿಯು ಬೆಡ್ ಸಾಮಾನ್ಯ ಬೆಡ್ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸೋಂಕಿತರಿಗೆ ಅಗತ್ಯವಾಗಿರುವ ವೈದ್ಯಕೀಯ ನೆರವು ನೀಡಲು ಸಿಮೆಂಟ್ ಉದ್ಯಮಿಗಳು ಮುಂದೆ ಬರುವಂತೆ ಸಚಿವ ನಿರಾಣಿ ಅವರು ಮನವಿ ಮಾಡಿಕೊಂಡರು.
ಇದಕ್ಕೆ ತಕ್ಷಣ ಸ್ಫಂದಿಸಿದ ವಿವಿಧ ಸಿಮೆಂಟ್ ಉದ್ಯಮಿದಾರರು ಸೋಂಕಿತರ ಚಿಕಿತ್ಸಾ ನೆರವಿಗೆ 5 ಕೋಟಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.