ಲಕ್ನೋ: ಕೊರೊನಾ ವೈರಸ್ ಎಂಬ ಮಹಾಮಾರಿ ಒಕ್ಕರಿಸಿದ ಬಳಿಕ ಜನರ ಜೀವನದಲ್ಲಿ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ದೂರದೂರುಗಳಿಂದ ಬರುವಂತಹ ಜನ ಕ್ವಾರಂಟೈನ್ ಮಾಡುತ್ತಾರೆಂಬ ಭಯದಿಂದ ಎಸ್ಕೇಪ್ ಆಗುತ್ತಿರುವುದನ್ನು ಕೇಳಿದ್ದೇವೆ. ಆದರೆ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೊರೊನಾದಿಂದ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತಪಡಿಸಿ ಶವವನ್ನು ನಡುರೋಡಿನಲ್ಲೇ ಬಿಟ್ಟು ಕುಟುಂಬ ಎಸ್ಕೇಪ್ ಆಗಿರುವುದು ಬೆಳಕಿಗೆ ಬಂದಿದೆ.
ಕಳೆದ 4 ದಿನಗಳ ಹಿಂದೆಯಷ್ಟೇ 35 ವರ್ಷದ ಪ್ರವಾಸಿ ಕಾರ್ಮಿಕರೊಬ್ಬರು ಮುಂಬೈನಿಂದ ಉತ್ತರಪ್ರದೇಶದ ಪ್ರತಾಪ್ ಗರ್ ವಾಪಸ್ಸಾಗಿದ್ದಾರೆ. ಹೀಗೆ ಬಂದವರಿಗೆ ಶನಿವಾರ ಅನಾರೋಗ್ಯ ಕಾಡಿದೆ. ಹೀಗಾಗಿ ಪ್ರಗ್ಯರಾಜ್ ನಲ್ಲಿರುವ ಎಸ್ಆರ್ಎನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ನೀಡುತ್ತಿರುವಾಗ ಕಾರ್ಮಿಕ ಸಾವನ್ನಪ್ಪುವ ಸಾಧ್ಯೆತಗಳು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಕೂಡಲೇ ರೋಗಿಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗುವಂತೆ ವೈದ್ಯರು ಕಾರ್ಮಿಕನ ಕುಟುಂಬಕ್ಕೆ ಸೂಚಿಸಿದ್ದಾರೆ. ಹೀಗೆ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆಯೇ ಕಾರ್ಮಿಕ ಮೃತಪಟ್ಟಿದ್ದಾರೆ. ಆದರೆ ಕುಟುಂಬಸ್ಥರು ಕೊರೊನಾದಿಂದಾಗಿಯೇ ಮೃತಪಟ್ಟಿರಬಹುದೆಂದು ಶಂಕಿಸಿ ಮೃತದೇಹವನ್ನು ದಾರಿ ಮಧ್ಯೆಯೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇತ್ತ ದಾರಿಯಲ್ಲಿ ಬಿದ್ದಿರುವ ಶವಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿತು. ತನಿಖೆ ನಡೆಸಿದ ಪೊಲೀಸರಿಗೆ ಕೋವಿಡ್ 19 ಭಯದಿಂದಲೇ ಶವ ಬಿಸಾಕಿರುವುದು ತಿಳಿದುಬಂತು. ಅಲ್ಲದೆ ಶವದ ವಾರಿಸುದಾರರು ಅದೇ ಗ್ರಾಮದವರು ಎಂದು ಕೂಡ ತಿಳಿಯಿತು. ಹೀಗಾಗಿ ಮೃತನ ಕುಟುಂಬಸ್ಥರು ನೀವೇ ಶವಸಂಸ್ಕಾರ ಮಾಡಿ ಎಂದು ಮನವರಿಕೆ ಮಾಡಿದರು.
ಕಾರ್ಮಿಕ ಕಳೆದ 4 ದಿಮಗಳ ಹಿಂದೆಯಷ್ಟೇ ಗ್ರಾಮಕ್ಕೆ ಬಂದಿದ್ದನು. 21 ದಿನಗಳ ಹೋಂ ಕ್ವಾರಂಟೈನ್ ಬಳಿಕ ಥರ್ಮಲ್ ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕೊರೊನಾ ನೆಗೆಟಿವ್ ಬಂದಿದೆ. ಆದರೆ ಕಾರ್ಮಿಕ ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದನು ಎಂದು ಡಿಎಸ್ಪಿ ಅತುಲ್ ಅಂಜನ್ ತಿಳಿಸಿದ್ದಾರೆ.