ಮಡಿಕೇರಿ: ಕೇರಳದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕೋವಿಡ್ ನೆಗೆಟಿವ್ ವರದಿ ಇಲ್ಲದಿದ್ದರೆ ಕರ್ನಾಟಕಕ್ಕೆ ಪ್ರವೇಶ ನೀಡಲಾಗುತ್ತಿಲ್ಲ. ಇದರಿಂದಾಗಿ ಕೇರಳ ಗಡಿ ಜಿಲ್ಲೆಯ ವರನೋರ್ವನಿಗೆ ತನ್ನ ವಿವಾಹ ಕಾರ್ಯಕ್ರಮಕ್ಕೆ ಬರಲು ತೊಂದರೆಯಾಗಿ ಕೊನೆಗೆ ಕೋವಿಡ್ ವರದಿಗಾಗಿ ಅಲೆದಾಟ ನಡೆಸಿ ರಿಪೋರ್ಟ್ನೊಂದಿಗೆ ಆಗಮಿಸಿ ಮದುವೆಯಾಗಿದ್ದಾರೆ.
ಮಡಿಕೇರಿಯ ಕಡಗದಾಳು ಗ್ರಾಮದ ರೋಹಿಣಿ-ಜಯಪ್ಪನಾಯ್ಕ ಮನೆಯಲ್ಲಿ ಕಳೇದ ನಾಲ್ಕು ದಿನಗಳಿಂದ ಆತಂಕ ಆವರಿಸಿತ್ತು. ರೋಹಿಣಿ-ಜಯಪ್ಪನಾಯ್ಕ ದಂಪತಿಯ ಮಗಳಾದ ಆಶಾ ಅವರಿಗೂ ಕಾಸರಗೋಡು ಜಿಲ್ಲೆ ಮುಳಿಯಾರ್ ನ ನಾರಾಯಣ ನಾಯರ್ ಮತ್ತು ಗೀತಾ ದಂಪತಿ ಪುತ್ರ ಪ್ರಮೋದ್ ಗೂ ಮದುವೆ ಫಿಕ್ಸ್ ಆಗಿತ್ತು. ಈ ನಿಟ್ಟಿನಲ್ಲಿ ಕೇರಳದಿಂದ ಕೊಡಗಿಗೆ ಬರುವವರು 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತರಲೇಬೇಕಾಗಿತ್ತು.
ಈ ನಿಯಮ ಆಶಾ-ಪ್ರಮೋದ್ ಮದುವೆಗೆ ಅಡ್ಡಿಯಾಗಿತ್ತು. ಅಷ್ಟೆ ಅಲ್ಲದೇ ಈ ಮದುವೆ ಮನೆಯ ಸಂಕಟದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ರೂಲ್ಸ್ ಮಾಡಿರೋದು ಸರಿ. ಆದರೆ ಸಡನ್ ಆಗಿ ಈ ರೂಲ್ಸ್ ಮಾಡಿರೋದು ನಮಗೆ ತಿಳಿದಿಲ್ಲ. ಈಗ ವಿಷಯ ತಿಳಿದು ಪರಿತಪಿಸುವಂತಾಗಿದೆ ಎಂದು ಆಶಾ ತಾಯಿ ರೋಹಿಣಿ ಪಬ್ಲಿಕ್ ಟಿವಿ ಮುಂದೆ ಅಳಲನ್ನು ವ್ಯಕ್ತಪಡಿಸಿದ್ದರು.
ಇದಾದ ಬಳಿಕ ವರ ಪ್ರಮೋದ್ ಕೇರಳದಿಂದ ನೆಗೆಟಿವ್ ವರದಿ ತಂದು ಮಂಜಿನ ನಗರಿಯ ಓಂಕಾರೇಶ್ವರ ದೇವಾಲಯದಲ್ಲಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಕೊರಾನಾ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ವರದಿಯನ್ನು ತಂದ ನಾರಾಯಣ ನಾಯರ್ ಮತ್ತು ಗೀತಾ ದಂಪತಿ ಪುತ್ರ ಪ್ರಮೋದ್ ಹಾಗೂ ಬೆರಳೆಣಿಕೆಯಷ್ಟು ಕುಟುಂಬ ಸದಸ್ಯರು ಸುಸೂತ್ರವಾಗಿ ಮದುವೆ ಕಾರ್ಯಕ್ರಮ ಮುಗಿಸಿ ತೆರಳಿದ್ದಾರೆ.