ಕೋಲ್ಕತ್ತಾ: ಕೋವಿಡ್ -19 ಸೋಂಕಿಗೆ ಒಳಗಾಗಿದರೆ ನಾನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಬ್ಬಿಕೊಳ್ಳುವುದಾಗಿ ನೂತನವಾಗಿ ನೇಮಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಜ್ರಾ ಈ ಹೇಳಿಕೆಯನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಹಜ್ರಾ ಮತ್ತು ಹೆಚ್ಚಿನ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಸಾಮಾಜಿಕ ಅಂತರವನ್ನು ಕೂಡ ಕಾಪಾಡಲಿಲ್ಲ. ಈ ಬಗ್ಗೆ ಅನುಪಮ್ ಹಜ್ರಾ ಬಳಿ ಪ್ರಶ್ನೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಹಜ್ರಾ, “ನಮ್ಮ ಪಕ್ಷದ ಕಾರ್ಯಕರ್ತರು ಕೊರೊನಾಕ್ಕಿಂತ ದೊಡ್ಡ ಶತ್ರುಗಳ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ” ಎಂದಿದ್ದಾರೆ.
ಒಂದು ವೇಳೆ ನನಗೆ ಕೊರೊನಾ ವೈರಸ್ ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತೇನೆ. ಕೋವಿಡ್ ರೋಗಿಗಳ ಕುಟುಂಬಗಳ ನೋವನ್ನು ಅನುಭವಿಸುವಂತೆ ಮಾಡಲು ಈ ಮಾಡುವುದಾಗಿ ಹಜ್ರಾ ತಿಳಿಸಿದ್ದಾರೆ.
ಕೋವಿಡ್ಗೆ ಬಲಿಯಾದವರ ಅಂತ್ಯಕ್ರಿಯೆ ನಡೆಯುವ ರೀತಿ ಕರುಣಾಜನಕವಾಗಿದೆ. ಅವರ ದೇಹಗಳನ್ನು ಸೀಮೆಎಣ್ಣೆಯಿಂದ ಸುಡಲಾಯಿತು. ನಾವು ಸತ್ತ ಬೆಕ್ಕುಗಳನ್ನು ಅಥವಾ ನಾಯಿಗಳನ್ನು ಸಹ ಆ ರೀತಿ ಪರಿಗಣಿಸುವುದಿಲ್ಲ. ಅಲ್ಲದೇ ಕೊರೊನಾನಿಂದ ಮೃತಪಟ್ಟವರ ಮುಖವನ್ನು ಕೂಡ ಅವರ ಕುಟುಂಬದವರಿಗೆ ತೋರಿಸುತ್ತಿಲ್ಲ ಎಂದು ಹಜ್ರಾ ಹೇಳಿದ್ದಾರೆ.
ಟಿಎಂಸಿಯ ಹಿರಿಯ ಮುಖಂಡ ಸೌಗತಾ ರಾಯ್ ಈ ಹೇಳಿಕೆಯನ್ನು ಖಂಡಿಸಿದ್ದು, ಇಂತಹ ಮಾತುಗಳು ಮತ್ತು ಹೇಳಿಕೆಗಳು ಬಿಜೆಪಿ ಮುಖಂಡರಿಂದ ಮಾತ್ರ ಬರಬಹುದು. ಇದು ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಟಿಎಂಸಿ ಹಜ್ರಾ ಹೇಳಿಕೆಯ ವಿರುದ್ಧ ಸಿಲಿಗುರಿಯಲ್ಲಿ ಪೊಲೀಸ್ ದೂರು ದಾಖಲಿಸಿದೆ. ನಾವು ಅನುಪಮ್ ಹಜ್ರಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇವೆ. ಕೂಡಲೇ ಅವರ ವಿರುದ್ಧ ಕ್ರಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದೇವೆ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.