ಚಾಮರಾಜನಗರ: ದೇಶಾದ್ಯಂತ ಕೊರೊನಾ ತಾಂಡವಾಡುತ್ತಿದ್ದು, ಬೆಡ್, ವೆಂಟಿಲೇಟರ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಇಷ್ಟಾದರೂ ಜನ ಮಾತ್ರ ಜಾಗೃತರಾಗುತ್ತಿಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ದಂಡ ವಿಧಿಸುವುದರ ಜೊತೆಗೆ ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತಿದೆ. ಹೀಗೆ ಕೊರೊನಾ ನಿಯಮ ಉಲ್ಲಂಘಿಸಿದಕ್ಕೆ ಜಿಲ್ಲೆಯಲ್ಲಿ 51 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ಕುರಿತು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 4 ತಿಂಗಳಿನಲ್ಲಿ ಮಾಸ್ಕ್ ಹಾಕದವರಿಂದ 14 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಮೂರು ದಿನಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಛತ್ರ, ಮದ್ಯದಂಗಡಿ ಮಾಲೀಕರು ಸೇರಿದಂತೆ 51 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ಒಟ್ಟು 51 ಎಫ್ಐಆರ್ ಗಳಲ್ಲಿ 47 ವಿಪತ್ತು ನಿರ್ವಹಣೆ ಕಾಯ್ದೆಯಡಿ ದಾಖಲಿಸಲಾಗಿದೆ. ಉಳಿದ 4 ಎಪಿಡಮಿಕ್ ಆ್ಯಕ್ಟ್ ಅಡಿ ಕೇಸ್ ರಿಜಿಸ್ಟರ್ ಮಾಡಲಾಗಿದೆ. ಲಾಕ್ಡೌನ್ ಗೆ ಜಿಲ್ಲೆಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಯಮ ಮೀರಿ ವರ್ತನೆ ಕಂಡರೆ ವಾಹನಗಳನ್ನು ಜಪ್ತಿ ಮಾಡಿ ಎಫ್ಐಆರ್ ದಾಖಲಿಸಲು ಸೂಚಿಸಲಾಗಿದೆ ಎಂದರು.
ನಗರದ ಷರೀಫ್ ವೃತ್ತದಲ್ಲಿ ಅಸಡ್ಡೆಯಿಂದ ಮಾಸ್ಕ್ ಧರಿಸದೆ ತಿರುಗಾಡುವವರಿಗೆ, ಅನಗತ್ಯವಾಗಿ ಓಡಾಡುತ್ತಿದ್ದವರನ್ನು ಹಿಡಿದು 100 ರೂ. ದಂಡ ವಿಧಿಸಲಾಗಿದೆ. ಇದೇ ತಪ್ಪನ್ನು ಪುನರಾವರ್ತಿಸಿದರೆ ವಾಹನ ಜಪ್ತಿ ಮಾಡುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.