ಕೋವಿಡ್ ಕೇರ್ ಸೆಂಟರ್ ಮೂಲಕ ಕೊಡಗು ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ತರುವ ಹುನ್ನಾರ

Public TV
2 Min Read
FotoJet 1 26

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಎಷ್ಟೇ ಜಾಸ್ತಿಯಾಗುತ್ತಿದ್ದರೂ, ಜಿಲ್ಲಾಡಳಿತ ಎಲ್ಲೆಡೆ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆದು ಎಲ್ಲರಿಗೂ ಚಿಕಿತ್ಸೆ ಕೊಡುವ ಕೆಲಸ ಮಾಡುತ್ತಿದೆ. ಎಲ್ಲೆಡೆ ಉತ್ತಮ ಆಹಾರವನ್ನು ಕೊಡಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಎಲ್ಲವೂ ಚೆನ್ನಾಗಿದ್ದರೂ ಊಟ ತಿಂಡಿ ಚೆನ್ನಾಗಿಲ್ಲ ಎಂದು ಗಲಾಟೆ ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿದೆ ಎನ್ನುವ ಅನುಮಾನ ಮೂಡಿದೆ.

FotoJet 45

ಹೌದು, ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿರುವ ನವೋದಯ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಮವಾರ ಬೆಳಿಗ್ಗೆ ತಿಂಡಿಗೆ ಕೊಟ್ಟಿದ್ದ ಉಪ್ಪಿಟ್ಟು ಸಂಪೂರ್ಣ ಉಪ್ಪಾಗಿದೆ. ಹೀಗೆ ಮಾಡಿದರೆ ನಾವು ಚೇತರಿಸಿಕೊಳ್ಳುವುದು ಹೇಗೆ ಎಂದು ಸೋಂಕಿತರು ವೈದ್ಯರ ಮೇಲೆಯೇ ಗಲಾಟೆ ಮಾಡಿದ್ದರು. ವೈದ್ಯರೊಂದಿಗೆ ಗಲಾಟೆ ಮಾಡುವ ವೀಡಿಯೋವನ್ನು ಸೆರೆ ಹಿಡಿದು ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಹಾಳಾಗಿರುವ ಉಪ್ಪಿಟ್ಟಿನ ಪ್ಯಾಕ್‍ಗಳ ಫೋಟೋಗಳನ್ನು ವೈರಲ್ ಮಾಡಿದ್ದರು. ಈ ಕುರಿತು ಕೋವಿಡ್ ಕೇರ್ ಸೆಂಟರ್‍ನ ಉಸ್ತುವಾರಿ ಹೊತ್ತಿಕೊಂಡಿರುವ ಕೊಡಗು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ ಅವರನ್ನು ಕೇಳಿದಾಗ ಕಥೆ ಬೇರೆ ಇರುವುದು ಇರುವುದು ಗೊತ್ತಾಗಿದೆ.

FotoJet 2 26

ಹಿಂದೆ ಹೊರಗಿನಿಂದ ಕೋವಿಡ್ ಕೇರ್ ಗಳಿಗೆ ಊಟ ತಿಂಡಿ ಪಾರ್ಸಲ್ ಮಾಡಿ ಸೋಂಕಿತರಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಸೋಂಕಿತರಿಗೆ ಊಟ ತಿಂಡಿ ಸಾಕಾಗುತ್ತಿಲ್ಲ ಎನ್ನುವ ದೂರುಗಳು ಬಂದಿದ್ದರಿಂದ ಜಿಲ್ಲಾಡಳಿತವೇ ಸ್ವತಃ ಅಡುಗೆ ಮಾಡಿಸಿಕೊಡುತ್ತಿದೆ. ನಾವು ಬೆಳಿಗ್ಗೆ ಸೋಂಕಿತರಿಗೆ ಉಪ್ಪಿಟ್ಟು ಕೊಟ್ಟಿರದೇ, ಚಿತ್ರಾನ್ನ ಕೊಟ್ಟಿದ್ದೆವು. ಆದರೆ ಕೊಟ್ಟಿರುವ ಉಪ್ಪಿಟ್ಟು ಸಂಪೂರ್ಣ ಉಪ್ಪಾಗಿದೆ ಎಂದು ಗಲಾಟೆ ಮಾಡಿದ್ದಾರೆ. ಚಿತ್ರಾನ್ನಕ್ಕೆ ಹುಳಿಯನ್ನು ಸರಿಯಾಗಿ ಮಿಕ್ಸ್ ಮಾಡದಿದ್ದರಿಂದ ಕೆಲವು ಪ್ಯಾಕ್‍ಗಳಲ್ಲಿ ಹುಳಿ ಜಾಸ್ತಿಯಾಗಿದ್ದರೆ, ಕೆಲವು ಪ್ಯಾಕ್‍ಗಳಲ್ಲಿ ಸಪ್ಪೆಯಾಗಿತ್ತು ಎನ್ನೋದು ಸತ್ಯ. ಇದು ಗೊತ್ತಾದ ಕೂಡಲೇ, ಅದನ್ನು ಬದಲಾಯಿಸಿ ಚಪಾತಿ ಮತ್ತು ಕೋಸು ಪಲ್ಯ ಕೊಟ್ಟಿದ್ದೇವೆ. ಇಷ್ಟಾದರೂ ಕೆಲವರು ಉದ್ದೇಶ ಪೂರ್ವಕವಾಗಿ ವೈದ್ಯರ ಕೊಠಡಿ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೆ ಯಾವುದೋ ಸಂದರ್ಭದ ಉಪ್ಪಿಟ್ಟಿನ ಪ್ಯಾಕ್ ಗಳನ್ನು ವೈರಲ್ ಮಾಡಿ ಕೆಟ್ಟ ಹೆಸರು ತರುವ ಹುನ್ನಾರ ಮಾಡಿದ್ದಾರೆ ಎನ್ನುತ್ತಿದ್ದಾರೆ.

FotoJet 3 22

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‍ರವರು ಕೂಡ ನಾನು ಪದೇ ಪದೇ ಕೋವಿಡ್ ಕೇರ್ ಸೆಂಟರ್‍ಗೆ ಹೋಗಿ ಪರಿಶೀಲಿಸುತ್ತಿದ್ದೇನೆ. ಎಲ್ಲವೂ ಚೆನ್ನಾಗಿದ್ದರೂ ಒಳ್ಳೆಯ ಕೆಲಸವನ್ನು ಗುರುತಿಸುತ್ತಿಲ್ಲ. ಕೆಲವು ನಾಲ್ಕು ಜನರು ಪದೇ ಪದೇ ಸುಳ್ಳು ವಿಷಯಗಳನ್ನು ಹೇಳುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *