– ಜಿಲ್ಲೆಯ 5 ಮಕ್ಕಳು ಸೇರಿದಂತೆ ರಾಜ್ಯದಲ್ಲಿ 32 ಮಕ್ಕಳು ಅನಾಥ
ಬಾಗಲಕೋಟೆ: ಕೋವಿಡ್ ಎರಡನೇ ಅಲೆಯ ಅಬ್ಬರಕ್ಕೆ ತಂದೆ ತಾಯಿಯನ್ನು ಕಳೆದುಕೊಂಡ ಬಾಗಲಕೋಟೆಯ 5 ಮಕ್ಕಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 32 ಮಕ್ಕಳು ಅನಾಥರಾಗಿದ್ದಾರೆ. ಅಂತಹ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು 3,500 ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಇದನ್ನು ಓದಿ:ಯಡಿಯೂರಪ್ಪ ವೇಗಕ್ಕೆ ವಯಸ್ಸು ಅಡ್ಡಿಯಾಗುತ್ತಿಲ್ಲ: ಶಾಸಕ ರಘುಪತಿ ಭಟ್
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಮಾಧ್ಯಮದವರೊಂದಿಗೆ ಈ ವಿಷಯ ತಿಳಿಸಿದ ಅವರು, ಕೋವಿಡ್ನಿಂದ ಮೃತಪಟ್ಟ ತಂದೆ-ತಾಯಿಯರಿಂದ ತಬ್ಬಲಿಯಾದ ಮಕ್ಕಳಿಗೆ ಸರ್ಕಾರ ಕಾಳಜಿ ವಹಿಸಿದ್ದು, ಬಾಲಸೇವಾ ಯೋಜನೆ ಜಾರಿಗೆ ತಂದಿದೆ. ಅನಾಥರಾದ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು ಆ ಮಕ್ಕಳಿಗೆ 3,500 ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಲ್ಯಾಪ್ಟಾಪ್ ಸಹ ನೀಡಲಾಗುತ್ತಿದ್ದು, ಹೆಣ್ಣು ಮಕ್ಕಳಿದ್ದಲ್ಲಿ ಅಂತವರಿಗೆ 21 ವರ್ಷದ ನಂತರ 1 ಲಕ್ಷ ನೀಡಲಾಗುತ್ತಿದೆ ಎಂದಿದ್ದಾರೆ.
ಅನಾಥ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ದತ್ತು ಪ್ರಕ್ರಿಯೆ ಸರಳೀಕರಣಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ದಾನಿಗಳು ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾದಲ್ಲಿ ಅವಕಾಶ ನೀಡಲಾಗುತ್ತದೆ. ಜಿಲ್ಲೆಯಲ್ಲಿ 166 ಅಪೌಷ್ಠಿಕ ಮಕ್ಕಳಿದ್ದು, ಅವರಿಗೆ ಚವನಪ್ರಾಶ ನೀಡಲು ಸಲಹೆ ನೀಡಲಾಗಿದೆ. ಮಕ್ಕಳ ಸಹಾಯವಾಣಿ 1098ನ್ನು ಮತ್ತಷ್ಟು ಕ್ರೀಯಾಶೀಲವಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಕೊರೊನಾಗೆ ಹೆದರಿ ಊರು ಬಿಟ್ಟು ಗುಡಿಸಲಲ್ಲಿ ಕುಟುಂಬ ಜೀವನ
ಕೋವಿಡ್ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 51 ಬಾಲ್ಯವಿವಾಹ ನಡೆಯುತ್ತಿರುವ ಪೈಕಿ 44 ವಿವಾಹ ತಡೆಯಲಾಗಿದೆ. ಅದರಲ್ಲಿ 5 ಎಫ್ಐಆರ್ ದಾಖಲಾಗಿವೆ. ಸಂಭವನೀಯ 3ನೇ ಅಲೆಯಿಂದ ಮಕ್ಕಳ ಮೇಲೆ ಪರಿಣಾಮ ಬೀರುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೂರು ಬಾರಿ ಸಭೆ ನಡೆಸಲಾಗಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಮಕ್ಕಳ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೇ ಚಿಕಿತ್ಸೆಗೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುವುದೆಂದು ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.