ನವದೆಹಲಿ: ಕೋಲಾರದ ನರಸಾಪುರ ಘಟಕದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಕಾರ್ಮಿಕರ ದಾಂಧಲೆ ಸಂಬಂಧ ಈಗ ಐಫೋನ್ ತಯಾರಕ ಆಪಲ್ ಕಂಪನಿ ತನಿಖೆ ನಡೆಸಲು ಮುಂದಾಗಿದೆ.
ತನ್ನ ಪೂರೈಕೆದಾರರಿಗೂ ಹಲವು ಮಾರ್ಗಸೂಚಿಗಳನ್ನು ವಿಧಿಸಿ ಆಪಲ್ ಗುತ್ತಿಗೆ ನೀಡುತ್ತದೆ. ಈ ಮಾರ್ಗಸೂಚಿಯನ್ನು ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ಮುರಿದಿದ್ಯಾ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಅಮೆರಿಕದ ಆಪಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಓದಿದ ವಿದ್ಯಾರ್ಹತೆಗೂ ನೀಡುತ್ತಿರುವ ಸಂಬಳಕ್ಕೆ ಹೊಂದಿಕೆ ಆಗುತ್ತಿಲ್ಲ. ನಿಗದಿಯಾಗಿದ್ದ ಸಂಬಳಕ್ಕಿಂತ ಕಡಿಮೆ ಸಂಬಳ ನೀಡಿದ್ದು ಅಲ್ಲದೇ ಬೇಕಾಬಿಟ್ಟಿ ಕಡಿತಗೊಳಿಸಿದ್ದಾರೆ ಎಂದು ನೌಕರರು ಆರೋಪಿಸಿ ಡಿ.10 ರಂದು ದಾಂಧಲೆ ನಡೆಸಿದ್ದರು.
ಕಾರ್ಮಿಕರ ಆರೋಪದ ಹಿನ್ನೆಲೆಯಲ್ಲಿ ಒಪ್ಪಿಕೊಂಡಿದ್ದಕ್ಕಿಂತ ಕಡಿಮೆ ವೇತನ ನೀಡಲಾಗಿತ್ತಾ ಹಾಗೂ ಹೆಚ್ಚುವರಿ ಅವಧಿಯ ಕೆಲಸವನ್ನು ಲೆಕ್ಕ ಹಾಕಿ ಸಂಬಳ ನೀಡಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.
ಈ ಘಟನೆ ನಮಗೆ ಆಘಾತ ತಂದಿದೆ. ನಾವು ನಮ್ಮ ತಂಡದ ಮೂಲಕ ನರಸಾಪುರದಲ್ಲಿರುವ ವಿಸ್ಟ್ರಾನ್ನ ಘಟಕದ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದು, ಹೆಚ್ಚುವರಿ ಆಪಲ್ ತಂಡದ ಸದಸ್ಯರನ್ನು ಮತ್ತು ಲೆಕ್ಕ ಪರಿಶೋಧಕರನ್ನು ಘಟಕಕ್ಕೆ ರವಾನಿಸುತ್ತಿದ್ದೇವೆ. ನಮ್ಮ ತಂಡಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ ಎಂದು ಆಪಲ್ ತಿಳಿಸಿದೆ. ಇದನ್ನೂ ಓದಿ: ವಿಸ್ಟ್ರಾನ್ ಐಫೋನ್ ಘಟಕದಲ್ಲಿ ದಾಂಧಲೆ - 7 ಸಾವಿರ ಕಾರ್ಮಿಕರ ವಿರುದ್ಧ ದೂರು, 149 ಮಂದಿ ಅರೆಸ್ಟ್
ಭಾರತದಲ್ಲಿ ಫೋನ್ ತಯಾರಿಸುವುದರ ಜೊತೆಗೆ ವಿದೇಶಕ್ಕೆ ಫೋನ್ ರಫ್ತು ಮಾಡಲು ಐಫೋನ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿಸ್ಟ್ರಾನ್ ಕಂಪನಿ ಮೇಕ್ ಇನ್ ಇಂಡಿಯಾದ ಅಡಿ ಮತ್ತಷ್ಟು ಹಣವನ್ನು ಹೂಡಿಕೆ ಮಾಡಲು ಮುಂದಾಗಿದೆ.
ಈ ಘಟನೆಯಿಂದ ವಿದೇಶಿ ಹೂಡಿಕೆಯ ಮೇಲೆ ಪೆಟ್ಟು ಬೀಳುವ ಸಾಧ್ಯತೆ ಇರುವ ಕಾರಣ ಕರ್ನಾಟಕ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದೆ.