ಶಿವಮೊಗ್ಗ: ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಅರ್ಚಕರು ಮತ್ತು ಟ್ರಸ್ಟ್ನವರ ನಡುವಿನ ವಿವಾದ ಈಗ ಸುಖಾಂತ್ಯ ಕಂಡಿದೆ.
ಸಾಗರ ನ್ಯಾಯಾಲಯದ ನ್ಯಾಯಾಧೀಶರಾದ ಫೆಲಿಕ್ಸ್ ಅಲ್ಪಾನ್ಸೋ ಆಂತೋನಿ ಅವರು ಅರ್ಚಕ ಶೇಷಗಿರಿ ಭಟ್ ಹಾಗೂ ಟ್ರಸ್ಟಿ ರಾಮಪ್ಪ ಇಬ್ಬರನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ಕರೆಯಿಸಿ ರಾಜಿ ಸಂಧಾನ ನಡೆಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ದಸರಾ ಅಂಗವಾಗಿ ದೇವಸ್ಥಾನದಲ್ಲಿ ಹೋಮವನ್ನು ಶೇಷಗಿರಿ ಭಟ್ ಹಾಗೂ ರಾಮಪ್ಪ ಅವರ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ನಡೆಸಬೇಕು. ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವಂತೆ ನ್ಯಾಯಾಧೀಶರು ಅರ್ಚಕ ಹಾಗೂ ಟ್ರಸ್ಟಿ ಇಬ್ಬರಿಗೂ ಸೂಚಿಸಿದ್ದಾರೆ.
ಕೋವಿಡ್-19 ಮುಗಿಯುವವರೆಗೂ ಗರ್ಭಗುಡಿಯಲ್ಲಿ ಏಕ ಕಾಲದಲ್ಲಿ 40 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂಬ ನಿರ್ದೇಶನವನ್ನು ಜಡ್ಜ್ ನೀಡಿದ್ದಾರೆ.
ಏನಿದು ಪ್ರಕರಣ?
ನವರಾತ್ರಿ ಸಂದರ್ಭದಲ್ಲಿ ಹೋಮ ನಡೆಸಲು ಅರ್ಚಕರಿಗೆ ಟ್ರಸ್ಟಿನವರು ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕಾಗಿ ಅರ್ಚಕರು ಹಾಗೂ ಟ್ರಸ್ಟಿನವರ ನಡುವೆ ಘರ್ಷಣೆ ಸಹ ಉಂಟಾಗಿತ್ತು.
ಈ ಸಂಬಂಧ ಭಕ್ತರಾದ ಸಂದೀಪ್ ಜೈನ್ ಹಾಗೂ ನವೀನ್ ಜೈನ್ ಎಂಬುವವರು ಸಾಗರ ನ್ಯಾಯಾಲಯದಲ್ಲಿ ಟ್ರಸ್ಟಿ ರಾಮಪ್ಪ ಹಾಗೂ ಅವರ ಪುತ್ರ ರವಿಕುಮಾರ್ ಅವರು ಅರ್ಚಕ ಶೇಷಗಿರಿ ಭಟ್ ಅವರಿಗೆ ದೇವಸ್ಥಾನದಲ್ಲಿ ಪೂಜೆ ಹಾಗೂ ಹೋಮ ನಡೆಸಲು ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿ ದಾವೆ ಹೂಡಿದ್ದರು. ಅಲ್ಲದೇ ಪೂಜೆ ಹಾಗೂ ಹೋಮ ನಡೆಸಲು ಅಡ್ಡಿಪಡಿಸದಂತೆ ನ್ಯಾಯ ದೊರಕಿಸಿಕೊಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು.