ಉಡುಪಿ: ಕೊರೊನಾ ಜನತಾ ಕರ್ಫ್ಯೂ ಗೆ ಉಡುಪಿ ಸ್ತಬ್ಧವಾಗಿದೆ. ಈ ನಡುವೆ ರಷ್ಯನ್ ಪ್ರಜೆಯೊಬ್ಬರು ಭಗವದ್ಗೀತೆ ರಾಮಾಯಣ ಪುಸ್ತಕಗಳನ್ನು ರಥಬೀದಿಯಲ್ಲಿ ವಿಭಿನ್ನ ರೀತಿಯಲ್ಲಿ ಮಾರಾಟ ಮಾಡಿ ಕೊರೊನಾ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಕೃಷ್ಣಮಠ, ಸುತ್ತಲು ಅಷ್ಟಮಠಗಳ ರಥಬೀದಿಯಲ್ಲಿ ಸೈಕಲ್ನಲ್ಲಿ ಓಡಾಡುತ್ತಾ ಕೋತಿಯ ಮುಖವಾಡವನ್ನು ಮಾಸ್ಕ್ ಮಾಡಿಕೊಂಡು ಧರಿಸಿ ಓಡಾಡಿದ್ದಾರೆ. ತಲೆಗೆ ಬೋಳು ಮಾಡಿಕೊಂಡಿರುವ ಇವರು ಲೆದರ್ ಮುಖವಾಡ ಹಾಕಿಕೊಂಡು ಸೈಕಲ್ ರೈಡ್ ಮಾಡಿದ್ದಾರೆ. ರಥಬೀದಿಯಲ್ಲಿರುವ ಜನರಿಗೆ, ವ್ಯಾಪಾರಿಗಳಿಗೆ ಪುಸ್ತಕ ಮಾರಾಟ ಮಾಡುವ ಜೊತೆ ಕೊರೊನಾ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಇಸ್ಕಾನ್ ಸಂಸ್ಥೆಯ ಸದಸ್ಯರಾಗಿರುವ ಸತ್ಯ ಪ್ರಕಾಶ್ 20 ವರ್ಷಗಳಿಂದ ಉಡುಪಿಯಲ್ಲಿ ಧರ್ಮಜಾಗೃತಿಯ ಗ್ರಂಥಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂಗ್ಲಿಷ್ ಹಿಂದಿಯ ಜೊತೆ ಸ್ವಲ್ಪ ಕನ್ನಡದಲ್ಲೂ ಮಾತನಾಡುತ್ತಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸತ್ಯಪ್ರಕಾಶ್, ಮಹಾಮಾರಿ ಕೊರೊನ ಇಡೀ ವಿಶ್ವಕ್ಕೆ ಆವರಿಸಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತತೆ ಆಗಿದೆ. ರಥಬೀದಿಗೆ ಬರುವ ಜನರಿಗೆ ಧಾರ್ಮಿಕ ಪುಸ್ತಕಗಳನ್ನು ಕೊಡುವ ಜೊತೆಗೆ ಮಾಸ್ಕ್ ಧರಿಸಿ ಎಂಬ ಜನಜಾಗೃತಿ ಮೂಡಿಸುತ್ತಿದ್ದೇನೆ. ಹನುಮಂತ ದೇವರ ರೂಪವನ್ನು ಹೋಲುವ ಮಾಸ್ಕ್ ಧರಿಸಿದ್ದೇನೆ ಎಂದು ಹೇಳಿದ್ದಾರೆ.