ದಾವಣಗೆರೆ: ಈ ಹಿಂದೆ ಹೋರಿ, ಟಗರು ದಾಳಿಯಿಂದ ತಪ್ಪಿಸಿಕೊಂಡಿದ್ದ ಶಾಸಕ ರೇಣುಕಾಚಾರ್ಯ ಈ ಬಾರಿ ಕೋತಿಯಿಂದ ಬಚಾವ್ ಆಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತಾಲೂಕು ಕಚೇರಿ ಮುಂದೆ ಸ್ವಲ್ಪ ಯಾಮಾರುತ್ತಿದ್ದರೂ ಶಾಸಕರ ಮೇಲೆ ಕೋತಿ ದಾಳಿ ಮಾಡುತ್ತಿತ್ತು. ಕಳೆದ ಒಂದು ತಿಂಗಳಿನಿಂದ ಕೋತಿ ಸ್ಥಳೀಯ ಜನರಿಗೆ ತೊಂದರೆ ಕೊಡುತ್ತಿದೆ. 20ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ಕೂಡ ಮಾಡಿದ್ದು, ಆತಂಕ ಸೃಷ್ಟಿ ಮಾಡಿದೆ. ಇಂದು ಶಾಸಕರ ಮೇಲೆ ಕೂಡ ಕೋತಿ ದಾಳಿ ಮಾಡಲು ಮುಂದಾಗಿತ್ತು. ಆದರೆ ಅದಾಗಲೇ ಶಾಸಕರು ಕೋತಿ ದಾಳಿಯಿಂದ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಈ ಹಿಂದೆ ಶಾಸಕರು ಹೊನ್ನಾಳಿ ಪಟ್ಟಣದ ಸಂತೆ ಮೈದಾನದಲ್ಲಿ ಟಗರು ಕಾಳಗ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಚಾನೆ ನೀಡಿದ್ದರು. ಎರಡು ಟಗರುಗಳ ಕೊಂಬು ಹಿಡಿದು ಪರಸ್ಪರ ಕಾದಾಡುವಂತೆ ಶಾಸಕರು ಪ್ರೇರೇಪಿಸಿದ್ದರು.
ಈ ವೇಳೆ ಏಕಾಏಕಿ ಒಂದು ಟಗರು ಬಂದು ಡಿಚ್ಚಿ ಹೊಡೆದಿದೆ. ಈ ವೇಳೆ ಎಚ್ಚೆತ್ತಿದ್ದ ಶಾಸಕರು ಬೇಗನೆ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಮೂಲಕ ಅನಾಹುತದಿಂದ ಪಾರಾಗಿದ್ದರು. ಇದಕ್ಕೂ ಮೊದಲು ಶಾಸಕರು ಹೋರಿ ದಾಳಿಯಿಂದ ಕೂಡ ತಪ್ಪಿಸಿಕೊಳ್ಳುವ ಮೂಲಕ ಭಾರೀ ಅನಾಹುತದಿಂದ ಎಸ್ಕೇಪ್ ಆಗಿದ್ದರು.