ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟದ ಸಮಯದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಿಂದ ಹಾಲಿನ ದರ 4 ರೂಪಾಯಿ ಕಡಿತ ಮಾಡಿರೋದನ್ನ ಖಂಡಿಸಿ, ಚಿಕ್ಕಬಳ್ಳಾಪುರ ತಾಲೂಕು ನಂದಿ ಕ್ರಾಸ್ ಬಳಿಯ ಮೆಗಾಡೈರಿ ಬಳಿ ರೈತರು ಪ್ರತಿಭಟನೆ ನಡೆಸಿದರು.
ಇಷ್ಟು ದಿನ ತಲಾ ಒಂದು ಲೀಟರ್ ಗೆ 28 ರೂಪಾಯಿ ಕೊಡುತ್ತಿದ್ದು, ಈಗ 4 ರೂಪಾಯಿ ಕಡಿತಗೊಳಿಸಿದ್ದು, ಸದ್ಯ ರೈತರಿಗೆ ತಲಾ ಒಂದು ಲೀಟರ್ ಗೆ 24 ರೂಪಾಯಿ ಕೊಡಲಾಗುತ್ತಿದೆ. ಜುಲೈ 23 ರಿಂದ ನೂತನ ಪರಿಷ್ಕೃತ ದರ ಅನ್ವಯವಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಹಾಲಿನ ದರ ಕಡಿತಗೊಳಿಸಿರೋದು ಹೈನುಗಾರರಿಗೆ ಬರೆ ಎಳೆದಂತಾಗಿದೆ.
ಪ್ರತಿ ದಿನ ಜಿಲ್ಲೆಯಲ್ಲಿ ಸರಿಸಮಾರು 10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ಜಿಲ್ಲೆಯ ರೈತರಿಗೆ ದರ ಕಡಿತ ಸಮಸ್ಯೆಗಳನ್ನ ತಂದೊಡ್ಡಿದೆ. ಕೋವಿಡ್-19 ನಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಕುಸಿತಗೊಂಡಿದ್ದು, ಇದರಿಂದ ಹಾಲಿನ ದರ ಕಡಿತಗೊಳಿಸಲಾಗಿದೆ ಎನ್ನಲಾಗಿದೆ. ಆದರೆ ಒಕ್ಕೂಟದ ಈ ತೀರ್ಮಾನದ ವಿರುದ್ಧ ಆಕ್ರೋಶ ಹೊರಹಾಕಿರುವ ರೈತರು ಮೆಗಾ ಡೈರಿ ಎದುರು ಧರಣಿ ನಡೆಸಿ, ಸಾಂಕೇತಿಕವಾಗಿ ಹಾಲು ಕರೆಯುವ ಮೂಲಕ ಪ್ರತಿಭಟನೆ ನಡೆಸಿದರು.