ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಈಗಾಗಲೇ ಐಪಿಎಲ್-2020ಗಾಗಿ ಯುಎಇಗೆ ಪ್ರಯಾಣ ಬೆಳೆಸಿದೆ. ಐಪಿಎಲ್ಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಐಪಿಎಲ್ನಲ್ಲಿ ಆರ್ಸಿಬಿ ಬಹಳ ಜನಪ್ರಿಯವಾದ ತಂಡ. ಆದರೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಭಾರತ ತಂಡವನ್ನು ಮುನ್ನಡೆಸುವ ನಾಯಕ ವಿರಾಟ್ ಕೊಹ್ಲಿಯವರೇ ನಾಯಕನಾದರೂ ತಂಡ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಹೀಗಾಗಿ ತಂಡದ ನಾಯಕತ್ವವನ್ನು ಬದಲಿಸಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಎಂಬುದು ಕೆಲವರ ವಾದವಾಗಿದೆ.
ಈ ಪ್ರಶ್ನೆಗೆ ಖಾಸಗಿ ವಾಹಿನಿಯೊಂದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರಿಸಿರುವ ಆರ್ಸಿಬಿ ತಂಡದ ಚೇರ್ಮ್ಯಾನ್ ಸಂಜೀವ್ ಚುರಿವಾಲಾ, ವಿರಾಟ್ ಭಾರತ ತಂಡದ ನಾಯಕ. ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಆಟ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಆದರೆ ವಿರಾಟ್ ಅವರು ಯಾವ ರೀತಿಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಆರ್ಸಿಬಿ ತಂಡದ ಮಾಲೀಕನಾಗಿ ನಮಗೆ ಕೊಹ್ಲಿ ತಂಡದ ನಾಯಕನಾಗಿರುವುದು ಹೆಮ್ಮೆ ಎಂದು ಹೇಳಿದ್ದಾರೆ.
ಈ ಬಾರಿಯ ಆರ್ಸಿಬಿ ತಂಡ ಬಹಳ ಬ್ಯಾಲೆನ್ಸ್ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ತಂಡ ಬಹಳ ಬಲಿಷ್ಠವಾಗಿದೆ. ಹಿಂದಿನ ಆವೃತ್ತಿಯಲ್ಲಿ ನಮ್ಮ ತಂಡಕ್ಕೆ ಇದ್ದ ವೈಫಲ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಈ ಬಾರಿಯ ಹಾರಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿ ಮಾಡಿದ್ದೇವೆ. ಜೊತೆಗೆ ಸಿದ್ಧತೆಯನ್ನು ಕೂಡ ಮಾಡಿಕೊಂಡಿದ್ದೇವೆ. ಹೀಗಾಗಿ ಈ ಬಾರಿ ಕಪ್ ಗೆಲ್ಲುವ ವಿಶ್ವಾದಲ್ಲಿ ಇದ್ದೇವೆ ಎಂದು ಚುರಿವಾಲಾ ತಿಳಿಸಿದ್ದಾರೆ.
ತಂಡದಲ್ಲಿ ಉತ್ತಮ ಆಟಗಾರರು ಇದ್ದರೂ ಆರ್ಸಿಬಿ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ತಂಡದ ಆಟಗಾರರು ವೈಯಕ್ತಿಕವಾಗಿ ಉತ್ತಮವಾಗಿ ಆಡಿದರೂ ಒಂದು ತಂಡವಾಗಿ ಆಡುವಲ್ಲಿ ವಿಫಲರಾಗಿದ್ದಾರೆ. ಆರ್ಸಿಬಿ ಕಳೆದ ಮೂರು ಆವೃತ್ತಿಲ್ಲೂ ಅಂಕಪಟ್ಟಿಯಲ್ಲಿ, 8, 6 ಮತ್ತು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಳೆದ ಮೂರು ಆವೃತ್ತಿಯಲ್ಲಿ ಆರ್ಸಿಬಿ ತಂಡ ಫ್ಲೇಆಪ್ ಹಂತಕ್ಕೂ ಬಂದಿಲ್ಲ. ಇದು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ.
ಐಪಿಎಲ್ನಲ್ಲಿ ಬ್ಯಾಟ್ಸ್ಮ್ಯಾನ್ ಆಗಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿ, ಐಪಿಎಲ್ನಲ್ಲಿ 37.84ರ ಸರಾಸರಿಯೊಂದಿಗೆ ಒಟ್ಟು 5,412 ರನ್ ಗಳಿಸಿದ್ದಾರೆ ಮತ್ತು 131.61 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದಾರೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಐದು ಶತಕ ಮತ್ತು ಮೂವತ್ತಾರು ಅರ್ಧಶತಕ ಗಳಿಸಿದ್ದಾರೆ. ಜೊತೆಗೆ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಇದುವರೆಗೆ ನಾಯಕನಾಗಿ ಅವರು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ.