– ಕೇಂದ್ರ ಸಚಿವರು, ಶಾಸಕರು ಬಲಿಯಾಗಿದ್ದಾರೆ
ಬೆಂಗಳೂರು: ಕೇಂದ್ರ ಸಚಿವರು ಸೇರಿ, ಶಾಸಕರು ಕೊರೊನಾಗೆ ಬಲಿಯಾಗಿದ್ದಾರೆ. ಇನ್ನೂ ಎಷ್ಟು ಜನರನ್ನು ಕೊರೊನಾ ಬಲಿ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅಧಿವೇಶನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕ ಮಿತ್ರರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಕೊವೀಡ್ ಇನ್ನೂ ಎಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತೋ ಗೊತ್ತಿಲ್ಲ. ನೆನ್ನೆಯಷ್ಟೆ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ ಹೊಂದಿದ್ದಾರೆ. ಇವತ್ತು ನಾರಯಣರಾವ್ ನಮ್ಮ ಜೊತೆ ಇಲ್ಲ. ನಮಗೆಲ್ಲಾ ಅವರು ಆತ್ಮೀಯ ಸ್ನೇಹಿತರು. ಅವರನ್ನು ಕಳೆದುಕೊಂಡು ನಾವು ಏನು ಮಾತನಾಡಬೇಕು ಎಂಬುದೇ ದಿಕ್ಕು ತೋಚುತ್ತಿಲ್ಲ. ಸ್ನೇಹಜೀವಿಯಾಗಿದ್ದರು, ಅವರಂತೆ ನಾವೂ ಇರೋಣ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.
ನಾರಾಯಣ ರಾವ್ ಅವರು ಬಸವಕಲ್ಯಾಣದ ಅಭಿವೃದ್ಧಿಗೆ ಚಿಂತಿಸಿದ್ದರು. ಸದನದಲ್ಲಿ ಹಳ್ಳಿ ಸೊಗಡಿನಲ್ಲೇ ಮಾತನಾಡುತ್ತಿದ್ದರು. ಶ್ರೀಸಾಮಾನ್ಯರ ಸೇವೆಗೆ ಸಾಕಷ್ಟು ಪ್ರಯತ್ನಿಸಿದ್ದರು. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಾರಾಯಣ್ ರಾವ್ ನಿಧನ ತುಂಬಾ ನೋವು ತಂದಿದೆ. ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.