– ಕ್ವಾರಂಟೈನ್ ಸೆಂಟರ್ಗಳಿಗೆ ಕೀಟನಾಶಕ ಸ್ಪ್ರೇ
ಉಡುಪಿ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸ್ಫೋಟಗೊಳ್ಳುತ್ತಿದ್ದು, ಕೊರೊನಾ ಪೀಡಿತರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಆಸುಪಾಸಿನ ಜನ ಆತಂಕದಲ್ಲಿದ್ದಾರೆ. ಯಾಕೆಂದರೆ ಕೊಲ್ಲೂರಿನ ಕ್ವಾರಂಟೈನ್ ಸೆಂಟರ್ಗಳಿಗೆ ಕೊರೊನಾ ಸೋಂಕಿತರು ಹೆಚ್ಚಾಗಿದ್ದಾರೆ. ಹೀಗಾಗಿ ಕೊಲ್ಲೂರು ದೇವಸ್ಥಾನದ ರಸ್ತೆ ಸುತ್ತಮುತ್ತಲಿನ ಲಾಡ್ಜ್, ಹಾಸ್ಟೆಲ್ಗಳಿಗೆ ಕೀಟನಾಶಕಗಳನ್ನು ಸಿಂಪಡಣೆ ಮಾಡಲಾಗಿದೆ.
ಕೊಲ್ಲೂರು ದೇವಸ್ಥಾನಕ್ಕೂ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಹೊರಗೋಡೆಗೆ ರಾಸಾಯನಿಕವನ್ನು ಸಿಂಪಡಣೆ ಮಾಡಲಾಯಿತು. ಕೊಲ್ಲೂರು ಲಾಡ್ಜ್, ಎರಡು ಹಾಸ್ಟೆಲ್ಗಳಲ್ಲಿ 970 ಜನ ಮುಂಬೈನಿಂದ ಬಂದವರು ಕ್ವಾರಂಟೈನ್ ಆಗಿದ್ದಾರೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದ ಸಹಾಯ ಪಡೆದು ಕೀಟ ನಾಶಕವನ್ನು ಸಿಂಪಡಣೆ ಮಾಡಲಾಯಿತು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಜನ ಹೆಚ್ಚು ಓಡಾಡುವ ರಸ್ತೆಗಳಿಗೂ ಕೂಡ ಕೀಟನಾಶಕವನ್ನು ಅಗ್ನಿಶಾಮಕ ಸಿಬ್ಬಂದಿ ಸಿಂಪಡಣೆ ಮಾಡಿದರು.
ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಕ್ಷೇತ್ರಕ್ಕೆ ಮೂರು ಸಾವಿರ ಜನ ಹೊರ ರಾಜ್ಯದಿಂದ ಬಂದಿದ್ದಾರೆ. ಕ್ವಾರಂಟೈನ್ ಮಾಡುವ ಕೆಲಸ ಆಗಿದೆ. ಕೊಲ್ಲೂರಲ್ಲಿ ಸಾವಿರ ಜನ ಇದ್ದಾರೆ. ಅವರ ಬೇಡಿಕೆ ಒಂದೊಂದೇ ಈಡೇರಿಸುತ್ತಿದ್ದೇವೆ ಎಂದರು. ಸುರಕ್ಷತೆಗಾಗಿ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಗಿದೆ ಎಂದರು.