– 5.56 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 19 ಬೈಕ್ ವಶಕ್ಕೆ
ಬಳ್ಳಾರಿ: ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡ ದಾರಿ ಕಾಣದೆ ಕಳ್ಳತನಕ್ಕಿಳಿದಿದ್ದ 7 ಮಂದಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಸಿರುಗುಪ್ಪದಲ್ಲಿ ನಡೆದಿದೆ.
ಜಿಲ್ಲೆಯ ಸಿರುಗುಪ್ಪ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಗಳ್ಳತನದಲ್ಲಿ ಭಾಗಿಯಾಗಿದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಸಿರುಗುಪ್ಪ ನಗರದ ಉಲ್ಲೇಶ್ (22) ನಾಗರಾಜ್ (21) ಇಸ್ಮಾಯಿಲ್ (27) ಸೇರಿದಂತೆ ಒಟ್ಟು ಏಳು ಜನ ಬಂಧನಕ್ಕೊಳಗಾದ ಆರೋಪಿಗಳಾಗಿದ್ದಾರೆ. ಸಿರುಗುಪ್ಪ ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಆರೋಪಿಗಳು ಬೈಕ್, ಮೊಬೈಲ್ ಫೋನ್, ಒಡವೆಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ 7.05 ಲಕ್ಷ ರೂ. ಮೌಲ್ಯದ 16 ಮೋಟಾರ್ ಸೈಕಲ್, 5.56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಒಂಬತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿರುಗುಪ್ಪ ನಗರದ ಬಿ.ರಾಘವೇಂದ್ರ ನೀಡಿದ ದೂರಿನನ್ವಯ ಕಳ್ಳರ ಪತ್ತೆಗೆ ಪೊಲೀಸರ ಬಲೆ ಬೀಸಿ ನಿನ್ನೆ ರಾತ್ರಿ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕೇವಲ ಸಿರುಗುಪ್ಪ ಮಾತ್ರವಲ್ಲದೇ ದಾವಣಗೆರೆ, ರಾಯಚೂರು ಭಾಗದಲ್ಲೂ ಕಳ್ಳತನ ಮಾಡುತ್ತಿದ್ದರು. ಕಳೆದ ಮೂರು ತಿಂಗಳಿಂದ ಕೆಲಸ ಕಳೆದುಕೊಂಡಿದ್ದ ಏಳು ಜನ ಆರೋಪಿಗಳು, ಕಳ್ಳತನ ಮಾಡಲು ಮುಂದಾಗಿದ್ದರು. ಕೃತ್ಯಕ್ಕಿಳಿಯುವ ಮುನ್ನ ಆರೋಪಿಗಲು ರೈಸ್ ಮಿಲ್, ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ದಾಖಲಾಗಿದೆ.