ಬೆಂಗಳೂರು: ಬಿಜೆಪಿಯ ನೂತನ ರಾಜ್ಯಸಭಾ ಸದಸ್ಯ ರಾಯಚೂರಿನವರಾದ ಅಶೋಕ್ ಗಸ್ತಿ(55) ನಿಧನರಾಗಿದ್ದಾರೆ.
ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಗಸ್ತಿ ಅವರಿಗೆ ಕಳೆದ 15 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ರಾತ್ರಿ 10.31ರ ವೇಳೆಗೆ ಮೃತಪಟ್ಟಿದ್ದಾರೆ.
ಈ ಕುರಿತು ಬುಲೆಟಿನ್ ಬಿಡುಗಡೆ ಮಾಡಿರುವ ಮಣಿಪಾಲ್ ಆಸ್ಪತ್ರೆ, ಕೋವಿಡ್ 19 ಹಾಗೂ ನ್ಯುಮೋನಿಯಾದಿಂದ ಬಳುತ್ತಿದ್ದ ಅವರು ಸೆ.2 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತಜ್ಞ ವೈದ್ಯರ ಸಮಿತಿಯ ನಿರಂತರ ವೀಕ್ಷಣೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು-ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿಸಿದೆ.
ಎಬಿವಿಪಿಯಿಂದ ಶುರುವಾಗಿ ಆರ್ಎಸ್ಎಸ್ ನಲ್ಲಿ ಗುರುತಿಸಿಕೊಂಡಿದ್ದ ಗಸ್ತಿ ಈಗ ರಾಯಚೂರು ಬಳ್ಳಾರಿ ಕೊಪ್ಪಳ ಪ್ರಭಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಎರಡು ರಾಯಚೂರು ನಗರ ಕ್ಷೇತ್ರದ ಟಿಕೆಟ್ ಗೆ ಯತ್ನಿಸಿದ್ದರೂ ಸಿಕ್ಕಿರಲಿಲ್ಲ. ಬಿಜೆಪಿ ಹೈಕಮಾಂಡ್ ಅಶೋಕ್ ಗಸ್ತಿಯವರಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಜುಲೈ 22 ರಂದು ಅಶೋಕ್ ಗಸ್ತಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಈ ಹಿಂದೆ ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. 2001ರಲ್ಲಿ ರಾಯಚೂರು ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.
2010ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಪಕ್ಷಕ್ಕಾಗಿ ದುಡಿದಿದ್ದಾರೆ. 30 ವರ್ಷ ಹೋರಾಟ, ಸಂಘಟನೆ ಚತುರನಾಗಿ ಅಶೋಕ್ ಗಸ್ತಿ ಸೇವೆ ಸಲ್ಲಿಸಿದ್ದರು.
ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅಶೋಕ್ ಗಸ್ತಿ ಬಿ.ಎಲ್.ಸಂತೋಷ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ಜೂನ್ ನಲ್ಲಿ ರಾಜ್ಯಸಭಾ ಸದಸ್ಯರಾಗಿ ಅವಿರೋಧ ಆಯ್ಕೆಯಾಗಿದ್ದರು. ರಾಜ್ಯಸಭಾ ಸದಸ್ಯರಾಗಿ ಕೇವಲ ಮೂರು ತಿಂಗಳಾಗಿತ್ತು. ಪ್ರಮಾಣ ವಚನ ಮಾತ್ರ ಸ್ವೀಕರಿಸಿದ್ದ ಅವರು ಈಗ ನಡೆಯುತ್ತಿರುವ ಕಲಾಪಕ್ಕೆ ಕೋವಿಡ್-19 ನಿಂದಾಗಿ ಗೈರು ಹಾಜರಿ ಹಾಕಿದ್ದರು.
ನಮ್ಮ ಪಾಲಿಗೆ ಇದು ಬಹುದೊಡ್ಡ
ಆಘಾತ. ಇತ್ತೀಚೆಗಷ್ಟೇ ರಾಜ್ಯಸಭಾ
ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರು ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ. ಈ ಸಂಕಷ್ಟದ ಘಳಿಗೆಯಲ್ಲಿ ಅವರ ಕುಟುಂಬದೊಂದಿಗೆ ನಮ್ಮ ಪಕ್ಷ ಇರಲಿದೆ.
— Nalinkumar Kateel (@nalinkateel) September 17, 2020