ಪಾಟ್ನಾ: ಯುವಕನೋರ್ವ ಕೊರೊನಾ ಸೋಂಕಿನಿಂದ ಮೃತಪಟ್ಟ ಬಳಿಕ ಆತನ ಹೆಣವನ್ನು ಸ್ಮಶಾನಕ್ಕೆ ಸಾಗಿಸಲು ಅಂಬ್ಯುಲೆನ್ಸ್ ಸಿಗದೆ, ಮುನ್ಸಿಪಾಲಿಟಿ ಕಸ ವಿಲೇವಾರಿ ಮಾಡುವ ಗಾಡಿ ಮೂಲಕ ಸಾಗಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ನಳಂದ ಜಿಲ್ಲೆಯ ಮನೋಜ್ ಕುಮಾರ್ ಕೊರೊನಾ ಸೋಂಕಿಗೆ ತುತ್ತಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಸೋಂಕಿನಿಂದ ಮುಕ್ತವಾಗಿರುವುದಾಗಿ ವೈದ್ಯರು ತಿಳಿಸಿ ಮನೋಜ್ ಕುಮಾರ್ ಮನೆಗೆ ಬಂದಿದ್ದರು. ಆದರೆ ಮನೆಗೆ ಬಂದ ಕೆಲಹೊತ್ತಿನಲ್ಲೇ ಮನೋಜ್ ಕೊನೆಯುಸಿರೆಳೆದಿದ್ದಾರೆ.
ಬಳಿಕ ಸ್ಥಳೀಯರು ಹೆಣವನ್ನು ಸ್ಮಶಾನಕ್ಕೆ ಸಾಗಿಸಲು ಅಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ ಆದರೆ ಅಂಬ್ಯುಲೆನ್ಸ್ ಯಾವುದು ಕೂಡ ಬರದೆ ಇದ್ದಿದ್ದರಿಂದ ಸ್ಥಳೀಯ ಆಡಳಿತದ ಮುಖ್ಯಸ್ಥರೊಬ್ಬರನ್ನು ಭೇಟಿಯಾಗಿ ವಿಷಯ ತಿಳಿಸಿದ್ದಾರೆ. ಆದರೆ ಆತ ಹೆಣ ಸ್ಮಶಾನಕ್ಕೆ ಸಾಗಿಸಲು ವ್ಯವಸ್ಥೆ ಮಾಡಲು 22,000 ರೂಪಾಯಿ ಬೇಡಿಕೆ ಇಟ್ಟಿದ್ದಾನೆ.
ಬಳಿಕ ಮನೆಯವರು ಅಂತಿಮವಾಗಿ 16,500 ಕೊಡಲು ಒಪ್ಪಿದ್ದಾರೆ. ನಂತರ ಇಬ್ಬರು ಪಿಪಿಇ ಕಿಟ್ ಧರಿಸಿಕೊಂಡು ಬಂದು ಮುನ್ಸಿಪಾಲಿಟಿ ಕಸ ವಿಲೇವಾರಿ ಮಾಡುವ ಗಾಡಿಯಲ್ಲಿ ಹೆಣವನ್ನು ಹೊತ್ತೊಯ್ದಿದಿದ್ದಾರೆ. ಆ ಬಳಿಕ ಗಾಡಿಯಲ್ಲಿ ಹೆಣ ಸಾಗಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.