ಹಾಸನ: ಉತ್ಸವ ಮಾಡಲು ಒಪ್ಪದ್ದಕ್ಕೆ ಅರ್ಚಕನಿಗೆ ಥಳಿಸಿರುವ ಘಟನೆ ಹೊಳೆನರಸೀಪುರ ತಾಲೂಕಿನ ಕಬ್ಬತ್ತಿ ಗ್ರಾಮದಲ್ಲಿ ನಡೆದಿದೆ. ಕೊರೊನಾ ಸಮಯದಲ್ಲಿ ಉತ್ಸವ ಮಾಡಲು ಒಪ್ಪದ್ದಕ್ಕೆ ಥಳಿಸಿದ್ದಾರೆ ಎಂದು ಅರ್ಚಕನ ಕುಟುಂಬದವರು ಆರೋಪ ಮಾಡಿದ್ದಾರೆ.
ಗ್ರಾಮದ ರಂಗನಾಥಸ್ವಾಮಿ ದೇವರ ಅರ್ಚಕ ಶ್ರೀಕಾಂತ್ ಅವರಿಗೆ ದೇವರ ಉತ್ಸವ ಮಾಡಲು ಪೂಜೆ ಮಾಡುವಂತೆ ಗ್ರಾಮದ ಕೆಲ ಯುವಕರು ಹೇಳಿದ್ದರಂತೆ. ಆದರೆ ಕೊರೊನಾ ಕಾರಣದಿಂದ ಶ್ರೀಕಾಂತ್ ಅರ್ಚನೆ ಮಾಡಲು ಒಪ್ಪಿಲ್ಲ. ಹೀಗಾಗಿ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಷ್ಟೇ ಅಲ್ಲದೆ ನಮ್ಮ ಹಾಲನ್ನು ಡೈರಿಗೂ ಹಾಕಿಸಿಕೊಳ್ಳದೆ ಊರಿಂದಲೇ ಬಹಿಷ್ಕಾರ ಹಾಕಿದ್ದಾರೆ ಎಂದು ಅರ್ಚಕನ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ಥಳಿತಕ್ಕೊಳಗಾದ ಅರ್ಚಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನ್ಯಾಯಕ್ಕಾಗಿ ಅರ್ಚಕನ ಕುಟುಂಬದವರು ಗೊರೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.