– ಜಾತಿ-ಬೇಧವಿಲ್ಲದೆ ಮುನಿರತ್ನ ಹಸಿವು ನೀಗಿಸಿದ್ರು
ಬೆಂಗಳೂರು: ಪ್ರಪಂಚಕ್ಕೇ ಕೊರೊನಾ ಆವರಿಸಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಮಯದಲ್ಲಿ ಕ್ಷೇತ್ರದ ಜನತೆಗೆ ಆಹಾರ ನೀಡುವ ಮೂಲಕ ಮುನಿರತ್ನ ಅವರು ನಿಮ್ಮ ಪರವಾಗಿ ನಿಂತಿದ್ದಾರೆ. ಅವರಿಗೆ ಮತ ನೀಡಿ ಎಂದು ನಟ ದರ್ಶನ್ ಮನವಿ ಮಾಡಿಕೊಂಡರು.
ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮುನಿರತ್ನ ಅವರು ಹಲವು ವರ್ಷಗಳಿಂದ ನನಗೆ ಗೊತ್ತು. ವ್ಯಕ್ತಿಯಾಗಿ ಅವರನ್ನು ತುಂಬಾ ಇಷ್ಟ ಪಡುತ್ತೇನೆ. ಸಿನಿಮಾ ನಿರ್ಮಾಪಕರನ್ನಾಗಿ ಹಾಗೂ ಶಾಸಕರನ್ನಾಗಿಯೂ ಅವರನ್ನು ನೋಡಿದ್ದೇನೆ. ವ್ಯಕ್ತಿಯಲ್ಲಿ ಒಳ್ಳೆಯ ಗುಣ ಇದೆ ಎಂದಾದರೆ ನಾನು ಅವರ ಬಳಿ ಹೋಗುತ್ತೇನೆ. ಅದೇ ರೀತಿ ಅವರ ಕುರಿತು ಬೆಂಬಲಕ್ಕೂ ಹೋಗುತ್ತೇನೆ ಎಂದರು.
ಇಡೀ ಪ್ರಪಂಚಕ್ಕೆ ಕೊರೊನಾ ಆವರಿಸಿತು, ಎಲ್ಲರೂ ಮನೆ ಸೇರಿಕೊಂಡೆವು, ಊಟಕ್ಕೆ ಗತಿಯಿಲ್ಲದಂತಾಯಿತು. ಮನೆಯ ಖಜಾನೆಯಲ್ಲಿ ಹಣವಿತ್ತು. ಆದರೆ ತಿನ್ನೋಕೆ ಆಗಲಿಲ್ಲ. ಹಾಲನ್ನೂ ಕುಡಿಯಲು ಆಗಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಿದ್ದರೂ ಸಹ ಜನಗಳ ಪರ ನಿಂತುಕೊಂಡರು. ಎಷ್ಟು ಕೋಟಿಗಟ್ಟಲೇ ಹಣ ನೀಡಿದರೂ ಬೆಲೆ ಬರುವುದಿಲ್ಲ. ಆದರೆ ಒಂದು ಹೊತ್ತು ಊಟ ಹಾಕಿದರೆ ಅದಕ್ಕೆ ಬೆಲೆ ಬರುತ್ತದೆ ಎಂದು ತಿಳಿಸಿದರು.
ಅಂದು ಅವರು ಯಾರನ್ನೂ ಕೇಳದೆ, ಯಾವುದೇ ಜಾತಿಯನ್ನೂ ನೋಡದೆ ಹಸಿವು ಅಂತ ಬಂದವರಿಗೆಲ್ಲ ಊಟ ಹಾಕಿದರು. ಅಲ್ಲದೆ ಮನೆ ಮನೆಗೆ ಊಟ ಕಳುಹಿಸಿದರು. ಮತ ಹಾಕಿದ್ದಾರೆ ಎಂಬ ಉದ್ದೇಶದಿಂದಲ್ಲ. ಮಾನವೀಯತೆಯ ದೃಷ್ಟಿಯಿಂದ ಅವರು ಈ ಕೆಲಸ ಮಾಡಿದರು. ಇಂತಹ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಿದವರಿಗೆ ನಿಮ್ಮ ಅಮೂಲ್ಯ ಮತಗಳನ್ನು ಅವರಗೆ ಹಾಕಿ, ಮತ್ತೆ ನಿಮ್ಮ ಸೇವೆ ಮಾಡುವ ಅವಕಾಶವನ್ನು ನೀಡಿ ಎಂದು ಮನವಿ ಮಾಡಿದರು.
ಯಶವಂತಪುರ ವಾರ್ಡ್ ನ ಪ್ರಮುಖ ಬೀದಿಗಳಲ್ಲಿ ದರ್ಶನ್ ರೋಡ್ ಶೋ ನಡೆಸಿದರು. ಡಿಬಾಸ್ ನೋಡಲು ಮನೆ, ಕಟ್ಟಡಗಳ ಮೇಲೆ ನೂರಾರು ಜನ ನಿಂತಿದ್ದರು. ದರ್ಶನ್ ಮೇಲೆ ಹೂ ಎರಚಿ ದರ್ಶನ್ ಗೆ ಜೈಕಾರ ಕೂಗಿದರು. ಅಲ್ಲದೆ ಯಶವಂತಪುರದ ಬಿ.ಕೆ.ನಗರದಲ್ಲಿ ದರ್ಶನ್ಗೆ ಬೃಹತ್ ಸೇಬಿನ ಹಾರ ಹಾಕಿದರು. ಅಭಿಮಾನಿಗಳು ಜೆಸಿಬಿ ಮೂಲಕ 200 ಕೆಜಿ ತೂಕದ ಸೇಬಿನ ಹಾರ ಹಾಕಿದರು. ಪಟಾಕಿ ಸಿಡಿಸಿ, ಬೃಹತ್ ಹಾರ ಅರ್ಪಿಸಿ ಸಂಭ್ರಮಿಸಿದರು. ಇದೇ ವೇಳೆ ಮಾಸ್ಕ್ ಧರಿಸಿ ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಸನ್ನೆ ಮೂಲಕ ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಆರ್.ಅಶೋಕ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಯಶವಂತಪುರದ ವಿವಿಧೆಡೆ ದರ್ಶನ್ ಅದ್ಧೂರಿ ಪ್ರಚಾರ ನಡೆಸಿದರು.