– ಡಿಸಿಎಂ ಪಟ್ಟಕ್ಕೆ ಜಾರಕಿಹೋಳಿ, ಸಚಿವ ಸ್ಥಾನಕ್ಕೆ ಯೋಗೇಶ್ವರ್ ಲಾಬಿ
ನವದೆಹಲಿ: ಕೊರೊನಾ ಸಂಕಷ್ಟದ ನಡುವೆ ರಾಜಕೀಯ ಚಟುವಟಿಕೆಗಳು ಗರಿಗೆದರಲು ಆರಂಭಿಸಿದ್ದು, ಸ್ಥಾನಮಾನಕ್ಕಾಗಿ ದೆಹಲಿ ದಂಡಯಾತ್ರೆ ಶುರುವಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ತಮ್ಮನ್ನು ಡಿಸಿಎಂ ಮಾಡುವಂತೆ ಮನವಿ ಮಾಡಿದ್ದಾರೆ.
ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ಆಗಮಿಸಿರುವ ರಮೇಶ್ ಜಾರಕಿಹೋಳಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ಮಾಡಿ ಚರ್ಚೆ ನಡೆಸಿದರು. ರಮೇಶ್ ಜಾರಕಿಹೋಳಿ ಜೊತೆಗೆ ನೂತನ ಪರಿಷತ್ ಸದಸ್ಯ ಯೋಗೇಶ್ವರ್ ಕೂಡ ಉಪಸ್ಥಿತಿ ಇದ್ದು, ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಉಭಯ ನಾಯಕರ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
ಡಿಸಿಎಂ ಸ್ಥಾನ ನೀಡುವಂತೆ ಮನವಿ ಮಾಡಿರುವ ರಮೇಶ ಜಾರಕಿಹೋಳಿ, ಹಳೆ ಮಾತುಕತೆಯಂತೆ ನಿರ್ಧಾರ ಕೈಗೊಳ್ಳಬೇಕು ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ತೊರೆದು ಬರುವಾಗ ಬಿಜೆಪಿ ಡಿಸಿಎಂ ಸ್ಥಾನದ ಭರವಸೆ ನೀಡಲಾಗಿತ್ತು. ಈ ಕಾರಣಕ್ಕೆ ಎಲ್ಲರನ್ನು ಒಗ್ಗೂಡಿಸಿಕೊಂಡು ಬಿಜೆಪಿ ಸೆರ್ಪಡೆಯಾಗಿದೆ. ಹೈಕಮಾಂಡ್ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ಹೈಕಮಾಂಡ್ ಸಚಿವ ಸ್ಥಾನದ ಭರವಸೆ ನೀಡಿತ್ತು ಈಗ ಅವಕಾಶ ಸಿಕ್ಕಿದ್ದು ಸಚಿವ ಸ್ಥಾನ ನೀಡುವಂತೆ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಜೆ.ಪಿ ನಡ್ಡಾಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜೆ.ಪಿ ನಡ್ಡಾ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಉಭಯ ನಾಯಕರು ಭೇಟಿಯಾಗಿದ್ದು ನಾಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಮಂಗಳವಾರ ಭೇಟಿ ಮಾಡಲಿದ್ದಾರೆ.