ಚಾಮರಾಜನಗರ: ಕೊರೊನಾ ನಿಯಂತ್ರಣಕ್ಕೆ ಹಲವಾರು ಕ್ರಮ ಕೈಗೊಂಡಿರುವ ಸರ್ಕಾರ ಮದುವೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 50 ಜನಕ್ಕೆ ಮಿತಿಗೊಳಿಸಿದೆ. ಹೀಗಾಗಿ ವಿವಾಹ ಸಂಭ್ರಮವನ್ನು ಯೂಟ್ಯೂಬ್ ಲೈವ್ ಮಾಡಲಾಗಿದೆ.
ಸರ್ಕಾರ ವಿವಾಹ ಸಮಾರಂಭಗಳಿಗೆ 50 ಜನರಿಗೆ ಮಿತಿ ಹೇರಿದ ಕೂಡಲೇ ಸರ್ಕಾರದ ಮಾರ್ಗಸೂಚಿ ಪಾಲಿಸಲು ಮುಂದಾದ ಚಾಮರಾಜನಗರದ ಕುಟುಂಬವೊಂದು ಮದುವೆಯಲ್ಲಿ ಭಾಗವಹಿಸುವರ ಸಂಖ್ಯೆಯನ್ಮು ತೀರಾ ಹತ್ತಿರದ ಸಂಬಂಧಿಕರನ್ನೊಳಗೊಂಡಂತೆ 40 ಜನರಿಗೆ ಸೀಮಿತಗೊಳಿಸಿ ಉಳಿದ ಆಹ್ವಾನಿತರಿಗೆ ಮದುವೆ ಸಮಾರಂಭವನ್ನು ಕಣ್ತುಂಬಿಕೊಳ್ಳುವಂತೆ ಮಾಡಲು ಯುಟ್ಯೂಬ್ ಲೈವ್ ಮೊರೆ ಹೋಗಿದ್ದಾರೆ.
ಚಾಮರಾಜನಗರದ ಶಂಕರಪುರ ಬಡಾವಣೆಯ ಎಸ್. ಗಾಯತ್ರಿ ಮತ್ತು ಎಸ್ ರಾಮಮೂರ್ತಿ ಅವರ ಪುತ್ರ ಆರ್. ಚೇತನ್ ಹಾಗೂ ನಂಜನಗೂಡಿನ ಕೋಮಲ ಎಸ್.ಗುರುರಾಜ್ ದಂಪತಿಯ ಪುತ್ರಿ ಐಶ್ವರ್ಯ ಅವರ ಮದುವೆಯನ್ನು ಇಂದು ನಂಜನಗೂಡು ತಾಲೂಕು ಸಿಂಧುವಳ್ಳಿಯ ಶ್ರೀ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ನಡೆಸಲು ನಿಶ್ಚಯಿಸಲಾಗಿತ್ತು.
ಮದುವೆಗೆ ವಧು ವರ ಎರಡೂ ಕಡೆಯಿಂದ 2000ಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿತ್ತು. ಅದ್ದೂರಿ ಮದುವೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊರೊನಾ ನಿಯಂತ್ರಣದ ಹಿನ್ನಲೆಯಲ್ಲಿ ಸರ್ಕಾರ ಹಲವಾರು ನಿಬರ್ಂಧ ಹೇರಿದ ಹಿನ್ನಲೆಯಲ್ಲಿ ವರನ ಕಡೆಯಿಂದ 20 ಜನ ವಧುವಿನ ಕಡೆಯಿಂದ 20 ಜನ ಮಾತ್ರ ಭಾಗವಹಿಸಲು ತೀರ್ಮಾನಿಸಿದ ಎರಡೂ ಕುಟುಂಬಗಳು ಉಳಿದ ಆಹ್ವಾನಿತರಿಗೆ ಮದುವೆ ಸಮಾರಂಭದ ಚಿತ್ರಣವನ್ನು ಯುಟ್ಯೂಬ್ ಲೈವ್ ಮೂಲಕ ತೋರಿಸುವ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದಾರೆ.
ಆಹ್ವಾನಿತರಿಗೆ ನಿನ್ನೆಯೇ ವಾಟ್ಸಪ್ ಮೂಲಕ ಯುಟ್ಯೂಬ್ ಲೈವ್ ಲಿಂಕ್ ಕಳುಹಿಸಿದ ಕುಟುಂಬದವರು ಲೈವ್ನಲ್ಲಿ ಮದುವೆ ಸಮಾರಂಭ ವೀಕ್ಷಿಸಿ ಆನ್ ಲೈನ್ ನಲ್ಲೇ ಹರಸುವಂತೆ ಕುಟುಂಬದವರಿ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಮದುವೆಗೆ ಆಹ್ವಾನಿತರಾಗಿದ್ದವರು ಕೊರೊನಾ ಹಿನ್ನಲೆಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸದೆ ಯೂಟ್ಯೂಬ್ ಲೈವ್ ಮೂಲಕ ಮದುವೆ ಸಮಾರಂಭವನ್ನು ಕಣ್ತುಂಬಿಕೊಂಡರು.