– ದೇಶ ಮೊದಲು ವೆಬಿನಾರ್ ಸರಣಿಯ 6 ಕಂತು
– ಔಷಧ ವಲಯ ಎದುರಿಸುತ್ತಿರುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ಚರ್ಚೆ
ಬೆಂಗಳೂರು: ವಿಶ್ವದ ಲಸಿಕೆ ಉತ್ಪಾದನೆಯ ಶೇ.60 ರಷ್ಟು ಹಾಗೂ ಇನ್ನಿತರ ಔಷಧಗಳ ಉತ್ಪಾದನೆಯಲ್ಲಿ ಶೇ. 49 ರಷ್ಟು ಕೊಡುಗೆಯನ್ನು ಹೊಂದಿರುವ ಭಾರತದ ಔಷಧ ಕ್ಷೇತ್ರ ಕೊರೊನಾ ಪಿಡುಗಿನ ವಿರುದ್ಧದ ವಿಶ್ವದ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.
ಭಾರತೀಯ ಔಷಧ ವಲಯ ಎದುರಿಸುತ್ತಿರುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ಅನಂತಕುಮಾರ್ ಪ್ರತಿಷ್ಠಾನದ `ದೇಶ ಮೊದಲು’ ವೆಬಿನಾರ್ ಸರಣಿಯ 6 ಕಂತಿನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಔಷಧ ಉತ್ಪಾದನೆ ಹಾಗೂ ಸಂಶೋಧನೆಯ ಕ್ಷೇತ್ರಕ್ಕೆ ಬಹಳ ಅವಕಾಶಗಳು ಇವೆ. ಭಾರತ ದೇಶ ವಿಶ್ವದ ಔಷಧಾಲಯ ಎಂದೇ ಹೆಸರುವಾಸಿ. ಕೊರೊನಾ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಕೊರೊನಾ ಮೂರನೇ ಅಲೆಯ ಬಗ್ಗೆ ಸಿಎಂ ಆತಂಕ
ರೆಡ್ಡಿ ಲ್ಯಾಬೋರೇಟರಿ ಸಿಇಓ (ಏಪಿಐ ಮತ್ತು ಸರ್ವೀಸಸ್) ದೀಪಕ್ ಸಪ್ರ ಮಾತನಾಡಿ, ಎಪಿಐ ಹಾಗೂ ಔಷಧ ಪ್ಯಾಕೇಜಿಂಗ್ ನಲ್ಲಿ ಹಲವಾರು ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ. ಆದರೆ ಅದನ್ನು ಹೊರತಪಡಿಸಿ ದೇಶ ಔಷಧ ಹಾಗೂ ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಹೊಸ ಔಷಧವನ್ನು ಸಿದ್ದಪಡಿಸುವಂತಹ ಆರ್ಥಿಕ ಸಾಮರ್ಥ್ಯವನ್ನು ನಮ್ಮ ದೇಶದ ಬಹಳಷ್ಟು ಕಂಪನಿಗಳು ಹೊಂದಿಲ್ಲ. ಆದರೆ ಸಂಶೋಧನೆ ಆಗಿರುವ ಔಷಧಗಳ ಉತ್ಪಾದನೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದ್ದೇವೆ. ಜೆನೆರಿಕ್ ಔಷಧಗಳು, ಬ್ರಾಂಡೆಡ್ ಔಷಧಗಳಷ್ಟೇ ಪರಿಣಾಮಕಾರಿಯಾಗಿವೆ ಎಂದು ಹೇಳಿದರು.
ಐಕ್ಯೂಜಿಇಎನ್-ಎಕ್ಸ್ ಫಾರ್ಮಾ ಪ್ರೈ ಲಿಮಿಟೆಡ್ನ ಅಧ್ಯಕ್ಷರು ಹಾಗೂ ಸಿಇಓ ಮಂದಾರ ಕೊಡಗುಲೆ ಮಾತನಾಡಿ, ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ದೊರೆಯುವ ಔಷಧ ಗುಣಮಟ್ಟ ಹಾಗೂ ಅದಕ್ಕಾಗಿ ಅನುಸರಿಸಲಾಗುವಂತಹ ಮಾನದಂಡಗಳು ನಮ್ಮ ದೇಶದಲ್ಲಿಯೂ ಅನುಸರಿಸಬೇಕು. ಹೊಸ ಔಷಧ ಸಂಶೋಧನೆ ಗೆ ಸುಮಾರು 10 ರಿಂದ 12 ವರ್ಷಗಳ ಸಮಯ ಬೇಕು, ಅದಕ್ಕೆ ಬೇಕಾದ ಹಣಕಾಸು ಬಹಳ. ಈ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ಇನ್ವೆಸ್ಟ್ ಮೆಂಟ್ ಸಂಸ್ಥೆಗಳು ಸಹಕಾರ ನೀಡಬೇಕು. ಔಷಧ ಉತ್ಪಾದನೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದರಿಂದ ಔಷಧದ ಬೆಲೆ ಹೆಚ್ಚಾಗುತ್ತದೆ ಎನ್ನುವುದು ಸರಿಯಾದ ತರ್ಕವಲ್ಲ. ದೇಶದಲ್ಲಿ ಬಳಸಲಾಗುತ್ತಿರುವ ಬ್ರಾಂಡೆಡ್ ಔಷಧಗಳ ಬೆಲೆ ಅವುಗಳ ಬ್ರಾಂಡ್ಗಳ ಮೇಲೆ ವ್ಯಯ ಮಾಡುವ ಹಣದಿಂದ ಹೆಚ್ಚಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಪಿ.ವಿ ಕೃಷ್ಣ ಭಟ್, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಪ್ರದೀಪ್ ಓಕ್, ಐಶ್ವರ್ಯ ಅನಂತಕುಮಾರ್, ಡಾ ಸಮೀರ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸುಮಾರು 400 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.