ರಾಯಚೂರು: ನಗರದ ರಿಮ್ಸ್ ಹಾಗೂ ಓಪೆಕ್ ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡದ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮುಂದೆ ತಮ್ಮ ಅಳಲು ತೋಡಿಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ 19 ಕುರಿತ ಸಭೆ ಹಾಗೂ ರಿಮ್ಸ್ ಪರಿಶೀಲನೆ ನಡೆಸಲು ನಗರಕ್ಕೆ ಆಗಮಿಸಿದ್ದ ಸಚಿವ ಡಾ.ಸುಧಾಕರ್ ರನ್ನ ತಡೆದು ರಿಮ್ಸ್ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರು ಸಂಬಳ ನೀಡುವಂತೆ ಆಗ್ರಹಿಸಿದರು. ವೈದ್ಯಕೀಯ ವಿಜ್ಞಾನಗಳ ಭೋದಕ ಆಸ್ಪತ್ರೆ ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಅಂತ ಆರೋಪಿಸಿದರು.
ನಗರದ ಕೋವಿಡ್ ಆಸ್ಪತ್ರೆ ಓಪೆಕ್ನ ಸಿಬ್ಬಂದಿಗಳಿಗೂ ಸಂಬಳ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಪ್ರತೀ ಬಾರಿಯೂ ಸರ್ಕಾರದಿಂದ ಹಣ ಬಂದಿಲ್ಲ ಅಂತ ಕಾರಣ ಹೇಳಲಾಗುತ್ತಿದೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಿಬ್ಬಂದಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮುಂದೆ ಸಿಬ್ಬಂದಿ ಅಳಲು ತೋಡಿಕೊಂಡರು. ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಸಂಬಳ ನೀಡುವಂತೆ ಒತ್ತಾಯಿಸಿದರು. ಪ್ರತೀ ತಿಂಗಳು ನೀಡಬೇಕಾದ ಸಂಬಳವನ್ನ ವರ್ಷಕ್ಕೆ ಎರಡು ಮೂರು ಬಾರಿ ನೀಡಲಾಗುತ್ತೆ ಅಂತ ಆರೋಪಿಸಿದರು.
ಕೇವಲ ಘೋಷಣೆ ಕೂಗಿದ್ರೆ ನಿಮಗೆ ಸಂಬಳ ಸಿಗುವುದಿಲ್ಲ. ಮನವಿ ಪತ್ರಗಳನ್ನು ನೀಡಿದರೆ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡ್ತೇನೆ ಎಂದ ಸಚಿವ ಡಾ.ಸುಧಾಕರ್ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ನೀಡುವಂತೆ ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರೆಗೆ ಸೂಚನೆ ನೀಡಿದರು.