ಚಿಕ್ಕಮಗಳೂರು: ಕೋವಿಡ್ನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಮೆರವಣಿಗೆ ಮಾಡಿಕೊಂಡು ಅಂತ್ಯ ಸಂಸ್ಕಾರ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಜಾವೂರು ಗ್ರಾಮದಲ್ಲಿ ನಡೆದಿದೆ. ಇದನ್ನು ಓದಿ:ಸಾಮಾಜಿಕ ಅಂತರ ಇಲ್ಲದೇ ಬರ್ತ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿವಿಎಸ್, ಬೊಮ್ಮಾಯಿ
ಈ ಅಂತ್ಯಸಂಸ್ಕಾರ ಹಾಗೂ ಮೆರವಣಿಗೆಯಲ್ಲಿ ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಕೂಡ ಭಾಗವಹಿಸಿದ್ದು, ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿಗೆ ತುತ್ತಾಗಿದ್ದ ಜಾವೂರು ಮೂಲದ ಸುಧಾಕರ್ ಬಾಬು ಎಂಬ ವ್ಯಕ್ತಿ ಶನಿವಾರ ಕೊರೊನಾಗೆ ಬಲಿಯಾಗಿದ್ದರು. ಅವರ ಮೃತದೇಹವನ್ನ ಅಜ್ಜಂಪುರ ಗ್ರಾಮಕ್ಕೆ ತಂದಾಗ ನೂರಾರು ಜನ ಅವರ ಮೃತದೇಹವನ್ನ ಅಜ್ಜಂಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.
ಬಳಿಕ ಮೃತದೇಹವನ್ನ ಜಾವೂರು ಗ್ರಾಮಕ್ಕೆ ತಂದು ಅಲ್ಲಿಯೂ ಕೂಡ ಮೃತದೇಹವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯುದ್ದಕ್ಕೂ ನೂರಾರು ಜನ ಭಾಗಿಯಾಗಿದ್ದು, ಅಂತ್ಯ ಸಂಸ್ಕಾರದ ವೇಳೆ ಕೂಡ 50ಕ್ಕೂ ಹೆಚ್ಚು ಜನ ಭಾಗವಹಿಸಿ ಕೊರೊನಾ ನಿಯಮವನ್ನ ಸಂಪೂರ್ಣ ಗಾಳಿಗೆ ತೂರಿದ್ದಾರೆ. ರಸ್ತೆಗಳಲ್ಲಿ ಅವರ ಮೃತದೇಹವನ್ನ ಮೆರವಣಿಗೆ ಮಾಡುವಾಗ ಪೊಲೀಸರು ಕೂಡ ಸ್ಥಳೀಯರನ್ನು ಚದುರಿಸಲು ಹರಸಾಹಸ ಪಟ್ಟಿದ್ದಾರೆ.
ಸದ್ಯ ಕೋವಿಡ್ನಿಂದ ಮೃತರಾದ ಸುಧಾಕರ್ ಬಾಬು, ಇಡೀ ಊರಿನಲ್ಲಿ ಒಳ್ಳೆ ಹೆಸರು ಸಂಪಾದಿಸಿದ್ದರು. ಕಷ್ಟ ಎಂದ ಸಾವಿರಾರು ಜನರಿಗೆ ಸಹಾಯ ಮಾಡಿದ್ದರು. ಅತ್ಯಂತ ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿ ಎನ್ನುವುದು ಸ್ಥಳೀಯರ ಮಾತು. ಹಾಗಾಗಿ, ಅವರ ಸಾವನ್ನ ಅರಗಿಸಿಕೊಳ್ಳಲಾಗದ ಹಳ್ಳಿಗರು ಮೃತದೇಹವನ್ನ ಮೆರವಣಿಗೆ ಮಾಡಿ ಅಂತಿಮ ವಿದಾಯ ಹೇಳಿದ್ದಾರೆ. ಇದನ್ನು ಓದಿ: ಹೋಮ್ ಐಸೋಲೇಶನ್ನಲ್ಲಿರುವವರಿಗೆ ಕೌನ್ಸಿಲಿಂಗ್- ಹಿಮ್ಸ್ ವಿದ್ಯಾರ್ಥಿಗಳಿಗೆ ಮೊದಲ ಸ್ಥಾನ