ಚಿಕ್ಕಮಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ ಜನ ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡದೆ, ಸಂಬಂಧವೇ ಇಲ್ಲ ಎಂಬಂತೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಹೀಗೆ ಮನಸೋ ಇಚ್ಛೆ ಓಡಾಡುತ್ತಿದ್ದ ಐವರ ವಿರುದ್ಧ ಜಿಲ್ಲೆಯ ಎರಡು ಪ್ರತ್ಯೇಕ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಕಮಗಳೂರು ನಗರದಲ್ಲಿ ಹೊರ ಜಿಲ್ಲೆಯಿಂದ ಬಂದವರಿಗೆ ಜಿಲ್ಲಾಡಳಿತ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಮೀರಿ ನಾಲ್ವರು ಕ್ವಾರಂಟೈನ್ ನಲ್ಲಿರದೆ ಹೊರ ಬಂದಿದ್ದಾರೆ. ಹೀಗಾಗಿ ಇವರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲೂ ಇಂಥದ್ದೇ ಪ್ರಕರಣ ನಡೆದಿದ್ದು, ಹೊರ ರಾಜ್ಯದಿಂದ ಬಂದಿದ್ದ ವ್ಯಕ್ತಿಗೆ ಜಿಲ್ಲಾಡಳಿತ ಕ್ವಾರಂಟೈನ್ ನಲ್ಲಿ ಇರುವಂತೆ ಆದೇಶಿಸಿತ್ತು. ಆದರೆ ಈತ ಸಹ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಎಂಬ ಕಾರಣಕ್ಕೆ ಆತನ ವಿರುದ್ಧವೂ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಜನ ಈಗಾಗಲೇ ಆತಂಕದಿಂದ ಬದುಕುತ್ತಿದ್ದಾರೆ. ಜೈಲಿನಲ್ಲಿರೋ ಖೈದಿ, ಪೊಲೀಸ್, ತರಕಾರಿ ವ್ಯಾಪಾರಿ, ಎಂಜಿನಿಯರ್, ಎಂ.ಎನ್.ಸಿ.ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆ ಎಲ್ಲರಲ್ಲೂ ಕೊರೊನಾ ಪಾಸಿಟಿವ್ ಬಂದಿರುವುದು ಜನರನ್ನು ಭಯಭೀತರನ್ನಾಗಿಸಿದೆ. ಈ ಮಧ್ಯೆ ಹೊರಜಿಲ್ಲೆ, ಹೊರರಾಜ್ಯದಿಂದ ಬಂದವರು ಕ್ವಾರಂಟೈನ್ನಲ್ಲಿರದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.