ಬೆಂಗಳೂರು: ರಾಜ್ಯಾದ್ಯಂತ ಇಂದು ಆಯುಧ ಪೂಜೆಯ ಸಂಭ್ರಮ ಕಳೆಗಟ್ಟಿದೆ. ಕೊರೊನಾ ಮಧ್ಯೆ ಆಯುಧ ಪೂಜೆ ಆಚರಣೆ ಭರದಿಂದ ಸಾಗುತ್ತಿದೆ.
ಆಯುಧ ಪೂಜೆಯ ಪ್ರಯುಕ್ತ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ನಲ್ಲಿ ಬೆಳ್ಳಂಬೆಳಗ್ಗೆ ಜನಜಾತ್ರೆ ಕಂಡುಬಂದಿದೆ. ಹೂ, ಹಣ್ಣು, ಬಾಳೆ ಕಂದು, ಬೂದಗುಂಬಳ ಖರೀದಿ ಭರಾಟೆ ಜೋರಾಗಿದೆ. ಸಾವಿರಾರು ಜನ ಒಟ್ಟಿಗೆ ಸೇರಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಕಾಲಿಡಲು ಜಾಗವಿಲ್ಲದಷ್ಟು ಜನ ತುಂಬಿಕೊಂಡಿದ್ದು, ಹಬ್ಬದ ಹಿನ್ನಲೆಯಲ್ಲಿ ಹೂ ಹಣ್ಣು ಖರೀದಿಸಲು ಜನಸಾಗರವೇ ಮುಗಿಬಿದ್ದಿದೆ.
ಕೊರೊನಾ ನಿಯಮಗಳು ಸಂಪೂರ್ಣ ಉಲ್ಲಂಘನೆಯಾಗಿವೆ. ಸಾಮಾಜಿಕ ಅಂತರವಿಲ್ಲದೇ ಜನ ವ್ಯಾಪಾರದಲ್ಲಿ ತಲ್ಲೀನರಾಗಿದ್ದು, ಕೊರೊನಾ ಸ್ಫೋಟವಾಗುವುದಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೆ ಸಿಗಲಾರದು ಎನ್ನುವಂತಾಗಿದೆ.
ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಭಕ್ತಾದಿಗಳೇ ಪೂಜೆ ಸಲ್ಲಿಸುತ್ತಿದ್ದಾರೆ. ವಾಹನಗಳ ಪೂಜೆಯಿಂದ ಅರ್ಚಕರು ದೂರ ಉಳಿದಿದ್ದಾರೆ. ಸದಾ ವಾಹನಗಳ ಪೂಜೆಯಲ್ಲಿ ಬಿಸಿ ಇರುತ್ತಿದ್ದ ಅರ್ಚಕರು, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದಾರೆ.
ಬಿಜಿಎಸ್ ಫ್ಲೈ ಓವರ್ ಮೇಲೆ ವೆಹಿಕಲ್ ಪಾರ್ಕಿಂಗ್ ಮಾಡಲಾಗಿದೆ. ಕಿಲೋಮೀಟರ್ ವರೆಗೆ ಜನ ತಮ್ಮ ತಮ್ಮ ವಾಹನ ನಿಲುಗಡೆ ಮಾಡಿದ್ದಾರೆ. ಬಿಜಿಎಸ್ ಪ್ಲೈಓವರ್ ನ ಎರಡೂ ಬದಿಯಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡಿ ಶಾಪಿಂಗ್ ಗೆ ಹೋಗಿರುವುದು ಕಂಡುಬಂದಿದೆ.