ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರದಲ್ಲಿ ವ್ಯಕ್ತಿ ಕೆರೆಗೆ ಕಲ್ಲು ಎಸೆದಿದ್ದರಿಂದ ಗ್ರಾಮಸ್ಥರು ಕೊರೊನಾ ಭೀತಿಯಿಂದ ಕೆರೆ ನೀರನ್ನ ಹೊರಹರಿಸಿದ ಪ್ರಕರಣ ಈಗ ಗಂಭೀರವಾಗುತ್ತಿದೆ.
ಈ ಕುರಿತು ಪಬ್ಲಿಕ್ ಟಿವಿ ಸಹ ವರದಿ ಪ್ರಸಾರ ಮಾಡಿತ್ತು. ಸಿರವಾರ ತಹಶೀಲ್ದಾರ್ ಕೆ.ಶೃತಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆರೆಯಲ್ಲಿ ಉಳಿದಿರುವ ನೀರನ್ನ ಹೊರಬಿಡದಂತೆ ಎಚ್ಚರಿಸಿದ್ದಾರೆ.
ಗ್ರಾಮ ಪಂಚಾಯ್ತಿ ಪಿಡಿಓ ಕೆರೆಯ ಹೂಳು ತೆಗೆಯಲು ನೀರು ಹೊರಬಿಟ್ಟಿರುವುದಾಗಿ ಸಮಜಾಯಿಷಿ ನೀಡಿದ್ದಾರಾದ್ರೂ ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನೀರನ್ನ ಹೊರಬಿಡಬಾರದು. ನೀರಿನ ಪರೀಕ್ಷೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಪಕ್ಕದ ಗ್ರಾಮದ ವ್ಯಕ್ತಿ ಕೆರೆಗೆ ಕಲ್ಲನ್ನ ಎಸೆದಿದ್ದು ಕೊರೊನಾ ಭೀತಿಯಿಂದ ಜನ ಕೆರೆ ನೀರನ್ನೇ ಖಾಲಿ ಮಾಡಲು ಮುಂದಾಗಿದ್ದರು.
ಪಂಪ್ ಸೆಟ್ ಕೆಟ್ಟಿದ್ದರಿಂದ ಕೆರೆಯಲ್ಲಿ ಅಲ್ಪಸ್ವಲ್ಪ ನೀರು ಉಳಿದಿದೆ. ಕೆರೆಗೆ ಕಲ್ಲು ಎಸೆದ ವ್ಯಕ್ತಿ ಈಗಾಗಲೇ ಕೆರೆ ನೀರನ್ನ ಕುಡಿದಿದ್ದಾನೆ. ಅದೇ ನೀರಲ್ಲಿ ಸ್ನಾನ ಮಾಡಿದ್ದಾನೆ. ಆದ್ರೆ ಗ್ರಾಮಸ್ಥರಿಗೆ ಅನುಮಾನ ಮಾತ್ರ ಹೋಗಿಲ್ಲ. ಕೆರೆ ನೀರನ್ನ ಬಿಟ್ಟು ಈಗ ಬೋರ್ ವೆಲ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.