ಚಿಕ್ಕಮಗಳೂರು: ಕೊರೊನಾ ಬಗ್ಗೆ ಮಾಧ್ಯಮಗಳೇ ಎಚ್ಚರಿಸಿಲ್ಲ ಅಂತ ಕತೆ ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಪಿ.ಪಿ.ಇ ಕಿಟ್ ಧರಿಸಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಆರೋಗ್ಯ ವಿಚಾರಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಸಲಹೆಗಳನ್ನ ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ. ಟೀಕೆಯನ್ನ ಕೊರೊನಾ ಎದುರಿಸಿದ ನಂತರ ವೈಫಲ್ಯಗಳನ್ನ ಬೊಟ್ಟು ಮಾಡಿ ತೋರಿಸಲಿ ಎಂದು ಸವಾಲೆಸೆದಿದ್ದಾರೆ.
ಬುದ್ಧಿವಂತರಂತೆ ಮುಂಚೆಯೇ ತಿಳಿದಿತ್ತು ಎಂದು ಕೆಲವರು ಮಾತನಾಡ್ತಿದ್ದಾರೆ. ಸರ್ಕಾರ ನಿಯಂತ್ರಣ ಹೇರಬೇಕೆಂಬ ಒತ್ತಡವನ್ನ ಯಾರೂ ಹಾಕಿಲ್ಲ. ವಿರೋಧ ಪಕ್ಷವೂ ಮಾಡ್ಲಿಲ್ಲ, ಮಾಧ್ಯಮವೂ ಮಾಡ್ಲಿಲ್ಲ. ರಾಜಕಾರಣಿಗಳು, ಮಾಧ್ಯಮ ಮಾಡಿದ್ದು ಬರೀ ಸಿಡಿ ಚರ್ಚೆ ಎಂದು ಹೇಳುವ ಮೂಲಕ ಸಿಟಿ ರವಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ.
ಕೋವಿಡ್ ಹೆಚ್ಚಾಗುತ್ತೆಂದು ತಜ್ಞರನ್ನ ಕರೆಸಿ ಎಜುಕೇಟ್ ಮಾಡುವ ಕೆಲಸವನ್ನ ಯಾರೂ ಮಾಡಿಲ್ಲ. ತಮಿಳುನಾಡಿನಲ್ಲಿ ಇದ್ದಾಗ ಘಟನೆಯನ್ನ ರಿಕಾಲ್ ಮಾಡ್ತಾ ಇದ್ದೀನಿ. ಈಗ ಹೇಳ್ತಿರೋದು ಸರ್ಕಾರದ ವೈಫಲ್ಯ ಅಂತ. ವಿಧಾನಸಭೆ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರು ಹೇಳಲಿಲ್ಲ. ಅಂದು ಸಲಹೆ ನೀಡಿದ್ರೆ ಇಂದು ಆಪಾದನೆಗೂ ತಾಕತ್ತು ಬರ್ತಿತ್ತು. ಸಕಾರಾತ್ಮಕವಾಗಿ ಬರೋದನ್ನ ಅನುಷ್ಠಾನಗೊಳಿಸಿ, ಒಟ್ಟಾಗಿ ಎದುರಿಸಬೇಕು ಎಂದು ತಿಳಿಸಿದರು.