ದಾವಣಗೆರೆ: ಪ್ರಸ್ತುತ ಜೂನ್ 7ರ ವರೆಗೆ ಲಾಕ್ಡೌನ್ ಇದೆ. ಈ ಲಾಕ್ಡೌನ್ ಮುಗಿಯಲು ಇನ್ನೂ ಏಳೆಂಟು ದಿನಗಳು ಇವೆ. ಮುಖ್ಯಮಂತ್ರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ, ಈಗಾಗಲೇ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಶೇ.10ಕ್ಕಿಂತ ಇಳಿಕೆಯಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಜಿಲ್ಲೆಯ ಹರಿಹರದಲ್ಲಿ ಮಾತನಾಡಿದ ಅವರು, ಅವಶ್ಯಕತೆ ಇದ್ದರೆ ಮಾತ್ರ ಜನ ಮನೆಯಿಂದ ಹೊರ ಬರಬೇಕು, ಜನರು ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವ ವರೆಗೆ ಸೋಂಕು ಇರುತ್ತದೆ. ಲಾಕ್ಡೌನ್ ಮುಂದುವರಿಸಬೇಕು ಎನ್ನುವುದನ್ನು ಸಿಎಂ ಈಗಾಗಲೇ ಹೇಳಿದ್ದಾರೆ, ಅದಕ್ಕೆ ನಮ್ಮ ಸಹಮತ ಇದೆ. ಒಂದು ವಾರಗಳ ಕಾಲ ಮುಂದುವರಿಸಿದರೆ, ಬಳಿಕ ಲಾಕ್ಡೌನ್ ಅಗತ್ಯ ಅರ್ಥವಾಗುತ್ತದೆ ಎಂದು ಲಾಕ್ಡೌನ್ ವಿಸ್ತರಣೆ ಬಗ್ಗೆ ಮನೆ ಮಾಡಿದ್ದ ಗೊಂದಲಕ್ಕೆ ತೆರೆ ಎಳೆದರು.
ಪದೇ ಪದೇ ಪೋಸ್ಟ್ ಮಾರ್ಟಂ ಮಾಡುವ ಅವಶ್ಯಕತೆ ಇಲ್ಲ, ಯಾರೋ ಮಾತನಾಡುತ್ತಾರೆ ಎಂದರೆ ಆಗಲ್ಲ, ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದರು.
ಬಿಜೆಪಿ ದೊಡ್ಡ ಹಾಗೂ ಪಕ್ಷ ಶಿಸ್ತಿನ ಪಕ್ಷ, ಯಡಿಯೂರಪ್ಪನವರ ಬಗ್ಗೆ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ, ಪದೇ ಪದೇ ತೌಡು ಕುಟ್ಟುವ ಕೆಲಸ ಬೇಡ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ರಾಜ್ಯಾಧ್ಯಕ್ಷರು ಹೇಳಿದ್ದಾರೆ, ಅಧ್ಯಕ್ಷರಿಗಿಂತ ನಾವೇನು ದೊಡ್ಡವರಲ್ಲ, ಅಧ್ಯಕ್ಷರು ಏನು ಹೇಳಿದರೂ ಅದು ಆಗಲೇ ಬೇಕು ಎನ್ನುವುದು ಎಲ್ಲರ ಬಯಕೆ, ಹೈಕಮಾಂಡ್ ಪ್ರತಿಯೊಂದನ್ನೂ ಗಮನಿಸುತ್ತಿದೆ ಎಂದರು.