ಮಂಡ್ಯ: ಕೊರೊನಾ ಸೋಂಕು ಎಲ್ಲಡೆ ಹೆಚ್ಚಳವಾಗುತ್ತಿದೆ. ಪಾಸಿಟಿವ್ ರೇಟ್ ಕುಗ್ಗಿಸಲು ಜಿಲ್ಲಾಡಳಿತ ಹಳ್ಳಿಗಳಲ್ಲಿ ಸೋಂಕು ತಡೆಯಲು ಲಸಿಕೆಯೇ ಮದ್ದು ಎಂದು ಹಳ್ಳಿ ಹಳ್ಳಿಗೆ ಹೋಗಿ ಲಸಿಕೆ ನೀಡುವ ಪ್ಲಾನ್ ಮಾಡಿದೆ.
ಲಕ್ಷಾಂತರ ಜನರ ಪ್ರಾಣ ಪಕ್ಷಿಯನ್ನು ವೈರಸ್ ಹೊತ್ತೊಯ್ದಿದೆ. ಹೀಗಾಗಿ ಇಡೀ ವಿಶ್ವವೇ ಕೊರೊನಾ ವೈರಸ್ನಿಂದ ದಿಗ್ಭ್ರಮೆಗೊಂಡಿದೆ. ಇದಕ್ಕೆ ಕರ್ನಾಟಕ ರಾಜ್ಯವೇನು ಹೊರತಾಗಿಲ್ಲ. ಕರ್ನಾಟಕ ರಾಜ್ಯದಲ್ಲೂ ಸಹ ಕೊರೊನಾ ರಣಕೇಕೆ ಹಾಕುತ್ತಿದೆ. ಹಳ್ಳಿಗಳಿಗೂ ಈ ವೈರಸ್ ವ್ಯಾಪಿಸಿರುವುದು ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ. ಹೀಗಾಗಿ ಈ ಆತಂಕವನ್ನು ದೂರ ಮಾಡಲು ಮಂಡ್ಯ ಜಿಲ್ಲಾಡಳಿತ ಹಳ್ಳಿಯಲ್ಲೂ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ. ಇದನ್ನೂ ಓದಿ: ನಿಮ್ಮ ಜೇಬು ತುಂಬಿದ್ರೆ ಸಾಕೆ?, ಬಡವರ ಸ್ಥಿತಿ ಏನಾಗ್ಬೇಕು?: ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಪ್ರಶ್ನೆ
ಸದ್ಯ ಮಂಡ್ಯ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 17 ರಷ್ಟು ಪಾಸಿಟಿವಿಟಿ ರೇಟ್ ಇದ್ದು, ಪ್ರತಿ ದಿನ 500 ಸಮೀಪ ಪಾಸಿಟಿವ್ ಕೇಸ್ಗಳು ದಾಖಲಾಗುತ್ತಿವೆ. ಹಳ್ಳಿಗಾಡಿನ ಪ್ರದೇಶಗಳಲ್ಲೇ ಹೆಚ್ಚು ಪಾಸಿಟಿವ್ ಕೇಸ್ ದಾಖಲಾಗಿವೆ. ಜಿಲ್ಲೆಯಲ್ಲಿ ಸದ್ಯ 4311 ಸಕ್ರಿಯ ಕೇಸ್ಗಳು ಇದ್ದು ಈ ಪೈಕಿ ಶೇಕಡ 70ರಷ್ಟು ಕೇಸ್ಗಳು ಗ್ರಾಮೀಣ ಪ್ರದೇಶಗಳಲ್ಲಿ ಇರುವುದು ಆತಂಕಕಾರಿ ವಿಷಯವಾಗಿದೆ. ಕಂಟ್ರೋಲ್ ಮಾಡುವ ಸಲುವಾಗಿ ಮಂಡ್ಯ ಜಿಲ್ಲಾಡಳಿತ ರಾಜ್ಯ ಸರ್ಕಾರದಿಂದ ಹೆಚ್ಚು ಲಸಿಕೆಗಳನ್ನು ತರಿಸಿಕೊಂಡು ಗ್ರಾಮೀಣ ಭಾಗಗಳಲ್ಲಿ ಲಸಿಕಾ ಅಭಿಯಾನ ಮಾಡಲು ತೀರ್ಮಾನ ಮಾಡಿದೆ. ಪಾಸಿಟಿವಿಟಿ ರೇಟ್ ಹಾಗೂ ಜನ ಸಂಖ್ಯೆ ಹೆಚ್ಚಿರುವ ಗ್ರಾಮೀಣ ಭಾಗಗಳಲ್ಲಿ ಈ ಅಭಿಯಾನ ಮಾಡಲು ಮುಂದಾಗಿದೆ. ಶಾಲೆ, ಸಮೂದಾಯ ಭವನಗಳಲ್ಲಿ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಸದ್ಯ ಮಂಡ್ಯ ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚಿದ್ದು, ಇದನ್ನು ತಡೆಯಲು ಲಸಿಕೆಯೇ ಮದ್ದು ಎಂದು ತಿಳಿದ ಜಿಲ್ಲಾಡಳಿತ ಹಳ್ಳಿ ಹಳ್ಳಿಯಲ್ಲೂ ಲಸಿಕಾ ಅಭಿಯಾನ ಮಾಡಲು ಮುಂದಾಗಿದ್ದು, ಜನರು ಸಹ ಇದನ್ನು ಬೆಂಬಲಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕಿದೆ.