ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ತಾಂಡವಾಡುತ್ತಿದೆ. ಈಗಾಗಲೇ ಕೊರೊನಾ ಪಾಸಿಟಿವ್ ಸಂಖ್ಯೆ 5000 ತಲುಪುತ್ತಿದೆ. ಇಂತಹ ಸಮಯದಲ್ಲಿ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಸಬೇಕಾದ ಜನಪ್ರತಿನಿಧಿಗಳೇ, ಕೊರೊನಾ ನೀತಿ-ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ಇಂದು ನಡೆದ ನ್ಯಾಷನಲ್ ಹೈವೆ ಗುದ್ದಲಿ ಪೂಜೆಯಲ್ಲಿ ಶಹಪುರದ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರರಿಂದ ಕೊರೊನಾ ಪ್ರೋಟೋಕಾಲ್ ಉಲ್ಲಂಘನೆಯಾಗಿದೆ. ಇದು ಜಿಲ್ಲೆಯ ಪ್ರಜ್ಞಾವಂತ ನಾಗರಿಕ ಅಸಮಾಧಾನಕ್ಕೆ ಕಾರಣವಾಗಿದೆ. ಸ್ವತಃ ಶಾಸಕ ಮತ್ತು ಅವರ ಬೆಂಬಲಿಗರಿಂದ ಕೊರೊನಾ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿದ್ದು, ಜಿಲ್ಲೆಯಲ್ಲಿ ರಾಜಕೀಯ ನಾಯಕರಿಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ.
ಗುದ್ದಲಿ ಪೂಜೆ ವೇಳೆಯಲ್ಲಿ ಸಂಪೂರ್ಣವಾಗಿ ಸಾಮಾಜಿಕ ಅಂತರ ಮರೆತು ಜೊತೆಗೆ ಮಾಸ್ಕ್ ಇಲ್ಲದೆ ಪೂಜೆಯಲ್ಲಿ ಗುಂಪು ಗುಂಪಾಗಿ ಜನರ ಜೊತೆ ಶಾಸಕರು ಭಾಗಿಯಾಗಿರುವುದಕ್ಕೆ ಕ್ರಮ ಕೈಗೊಳ್ಳಲು ಬೇಕೆಂದು ಜನ ಆಗ್ರಹಿಸಿದ್ದಾರೆ.