ಚಿತ್ರದುರ್ಗ: ದಿನದಿಂದ ದಿನಕ್ಕೆ ಕೊರೊನಾ ಹೆಚ್ಚತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ 19 ನಿಯಂತ್ರಿಸಲು ಸಿನಿಮಾದವರು ಸಹಕರಿಸಬೇಕು ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿನಿಮಾದವರು ರಾಯಭಾರಿಗಳಾಗಬೇಕೆಂಬ ಸಚಿವ ಡಾ. ಸುಧಾಕರ್ ಮನವಿಗೆ ಪ್ರತಿಕ್ರಿಯಿಸಿ, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿದ ನಿಯಮ ಪಾಲಿಸಬೇಕು. ಸರ್ಕಾರದ ಸೂಚನೆಯನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.
ಕಲ್ಲರಳಿ ಹೂವಾಗಿ ಸಿನೆಮಾ ಶೂಟಿಂಗ್ಗೆ ಚಿತ್ರದುರ್ಗಕ್ಕೆ ಬಂದಿದ್ದೆನು. ಅಂದು ಏಕನಾಥೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೆನು. ನಾನು ಹಿರೋ ಆದರೆ ಮಡಿಲು ತುಂಬುವ ಹರಕೆ ಹೊತ್ತಿದ್ದೆನು, ಅದು ಸತ್ಯವಾಯಿತು. ಚಿತ್ರದುರ್ಗಕ್ಕೆ ಬಂದಾಗೆಲ್ಲಾ ಏಕನಾಥೇಶ್ವರಿ ದೇವಿಯನ್ನು ಸ್ಮರಿಸುತ್ತೇನೆ. ಇಲ್ಲಿನ ಪ್ರತಿ ಸ್ಥಳದಲ್ಲೂ ಶಕ್ತಿ, ಮಹಿಮೆ ಇದೆ ಎಂದರು.
ಸಲಗ ಸಿನಿಮಾ ಪ್ರಚಾರಕ್ಕೆ ನಟ ಚಿತ್ರದುರ್ಗಕ್ಕೆ ಆಗಮಿಸಿದ್ದು, ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಸಲಗ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಆಡಿದರು. ಅಲ್ಲದೆ ಕ್ರಿಕೆಟ್ ಗ್ರೌಂಡ್ ನಲ್ಲಿ ನೃತ್ಯ ಮಾಡಿ ನೆರೆದವರನ್ನು ರಂಜಿಸಿದರು. ಇತ್ತ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗವೂ ನಡೆಯಿತು.