ಚೆನ್ನೈ: ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೊನಾಗೆ ಈಗ ತಮಿಳುನಾಡಿನಲ್ಲಿ ದೇವರ ಸ್ವರೂಪ ನೀಡಲಾಗಿದೆ. ಈ ಮೂಲಕ ಕೊರೊನಾ ಆರ್ಭಟವನ್ನು ತಣ್ಣಾಗಾಗಿಸುವಂತೆ ಕೊರೊನಾ ಅಮ್ಮನಿಗೆ ವಿಶೇಷ ಪೂಜೆ ನಡೆಸುವ ಮೂಲಕವಾಗಿ ಸುದ್ದಿಯಲ್ಲಿದೆ.
ಸೋಂಕು ನಿವಾರಣೆಗಾಗಿ ವಿಶೇಷ ಪೂಜೆಗೆ ಮೊರೆ ಹೋಗಿದ್ದಾರೆ ತಮಿಳುನಾಡಿನ ಕೊಯಿಮತ್ತೂರಿನ ಜನ. ಕೊಯಿಮತ್ತೂರಿನ ಹೆಸರಾಂತ ಕಾಮಾಚಿಪುರಿ ಅಧೀನಂ ಪೀಠ ಕೋವಿಡ್ ಸೋಂಕಿಗಾಗಿ ವಿಶೇಷವಾಗಿ ಕೊರೊನಾ ದೇವಿ ದೇಗುಲವನ್ನು ನಿರ್ಮಿಸಿದೆ. ಈ ದೇವಾಲಯದಲ್ಲಿ ಕೊರೊನಾ ದೇವರನ್ನು ಶಾಂತಗೊಳಿಸಿ, ಸೋಂಕು ನಿವಾರಣೆಯಾಗುವಂತೆ ದಿನನಿತ್ಯ ಪೂಜೆ ನಡೆಸಲಾಗುತ್ತಿದೆ.
ಈಗಾಗಲೇ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರೆವೇರಿಸಲಾಗುತ್ತಿದ್ದು, ಈ ದೇವಾಲದಯಲ್ಲಿ 48 ದಿನಗಳ ಕಾಲ ವಿಶೇಷ ಪೂಜೆ ಮತ್ತು ಪುನಸ್ಕಾರಗಳನ್ನು ನಡೆಯಲಿದೆ. ಇದರ ಜೊತೆಗೆ ವಿಶೇಷ ಮಹಾಯಾಗವನ್ನು ಆಯೋಜಿಸಿದ್ದು, ಈ ಮೂಲಕ ದೇವರನ್ನು ಸಂತೃಪ್ತಿಗೊಳಿಸಿ ಶಾಂತವಾಗುವಂತೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಧೀನಂನ ಮುಖ್ಯಸ್ಥ ಶಿವಲಿಂಗೇಶ್ವರ್ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಈ ಹಿಂದೆ ಸಾಂಕ್ರಾಮಿಕ ರೋಗಗಳು ಬಂದಾಗ ಅವುಗಳನ್ನು ದೇವಿ ರೂಪದಲ್ಲಿ ಆರಾಧಿಸಿ ದೇವಸ್ಥಾನ ನಿರ್ಮಿಸಲಾಗಿದೆ. ಈ ಹಿಂದೆ ಪ್ಲೇಗ್ ಜನರನ್ನು ಇನ್ನಿಲ್ಲಂತೆ ಕಾಡಿದಾಗ ಪ್ಲೇಗ್ ಮಾರಿಯಮ್ಮ ದೇವಾಲಯವನ್ನು ಕೊಯಿಮತ್ತೂರಿನಲ್ಲಿ ನಿರ್ಮಿಸಿ, ಪೂಜೆ ಸಲ್ಲಿಸಲಾಗಿತ್ತು.