ನವದೆಹಲಿ: ದೇಶದಲ್ಲಿ ಕೊರೊನಾ ಸ್ಫೋಟ ಹಿನ್ನೆಲೆ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಏಪ್ರಿಲ್ 25ರಂದು ಬೋರಿಸ್ ಜಾನ್ಸನ್ ಭಾರತಕ್ಕೆ ಬರುವ ಸಮಯ ನಿಗದಿಯಾಗಿತ್ತು. ಮುಂದಿನ ದಿನಗಳಲ್ಲಿ ಮತ್ತೆ ಸಮಯ ನಿಗದಿಗೊಳಿಸೋದಾಗಿ ಇಂಗ್ಲೆಂಡ್ ಪ್ರಧಾನಿಗಳ ಕಚೇರಿ ಸ್ಪಷ್ಟನೆ ನೀಡಿದೆ.
ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಎರಡು ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಭಾರತದ ಪ್ರವಾಸ ರದ್ದುಗೊಳಿಸಬೇಕೆಂದು ಇಂಗ್ಲೆಂಡ್ ವಿಪಕ್ಷಗಳು ಆಗ್ರಹಿಸಿದ್ದವು.
ಜಾನ್ಸನ್ ಅವರು ಆನ್ಲೈನ್ ಮೂಲಕ ಭಾರತದ ಪಿಎಂ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ ಎಂದು ಲೇಬರ್ ಪಾರ್ಟಿ ಪ್ರಧಾನಿಗಳಿಗೆ ಸಲಹೆ ನೀಡಿತ್ತು.
ಇಂತಹ ಸಂದರ್ಭದಲ್ಲಿ ಪಿಎಂ ಜಾನ್ಸನ್ ಮಾದರಿಯಾಗಿರಬೇಕು. ಭಾರತ ಪ್ರವಾಸದಿಂದ ದೇಶದ ಜನತೆಗೆ ತಪ್ಪು ಸಂದೇಶ ರವಾನೆ ಆಗುವ ಸಾಧ್ಯತೆಗಳಿವೆ. ಈ ಪ್ರವಾಸವನ್ನ ಸದ್ಯದ ಮಟ್ಟಿಗೆ ಮುಂದೂಡುವುದು ಉತ್ತಮ. ಭಾರತಕ್ಕೆ ಹೋಗುವ ಬದಲು ಝೂಮ್ ನಲ್ಲಿ ಸಭೆ ನಡೆಸಿ ಎಂದು ಲೇಬರ್ ಪಾರ್ಟಿಯ ಶೈಡೋ ಕಮ್ಯೂನಿಟಿ ಸೆಕ್ರಟರಿ ಸ್ವೀವ್ ರೀಡ್ ಆಗ್ರಹಿಸಿದ್ದರು.
ಇದಕ್ಕೂ ಮೊದಲು ಜನವರಿ 26ಕ್ಕೆ ಜಾನ್ಸನ್ ಅವರ ಭಾರತದ ಪ್ರವಾಸ ನಿಗದಿಯಾಗಿತ್ತು. ಅದು ಸಹ ಕಾರಣಾಂತರಗಳಿಂದ ರದ್ದುಗೊಂಡಿತ್ತು. ಇದೀಗ ಎರಡನೇ ಬಾರಿ ಪ್ರವಾಸ ರದ್ದಾಗಿದೆ. 2019ರ ಬ್ರಿಟನ್ ಚುನಾವಣೆ ಬಳಿಕ ಜಾನ್ಸನ್ ಅವರ ಮೊದಲ ಅತಿ ಸುದೀರ್ಘ ವಿದೇಶ ಪ್ರವಾಸ ಇದಾಗಿತ್ತು.