ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ ಮಾಡಲಾಗುವುದು. ಬೆಂಗಳೂರು ಮಾರ್ಗಸೂಚಿ ಮಂಗಳೂರಿಗೂ ಅನ್ವಯ ಮಾಡುತ್ತೇವೆ. ಕೆಲ ಬದಲಾವಣೆ ಮಾಡಿ ತಕ್ಷಣ ಮಾರ್ಗಸೂಚಿ ಹೊರಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಹೊರ ರಾಜ್ಯ, ಹೊರ ದೇಶದಿಂದ ಬಂದವರ ವಿಚಾರಕ್ಕೆ ಮಾರ್ಗಸೂಚಿ ಇದೆ. ವಿಮಾನ ಮೂಲಕ ಬರುವವರು ಮೊದಲೇ ರಿಜಿಸ್ಟರ್ ಮಾಡಬೇಕು. ಐಸಿಎಂಆರ್ ಗೈಡ್ ಲೈನ್ ಫಾಲೋ ಮಾಡಬೇಕು. ಬರುವ 48 ಗಂಟೆ ಒಳಗೆ ಕೊರೊನಾ ಟೆಸ್ಟ್ ನೆಗೆಟಿವ್ ವರದಿ ತರಬೇಕು. ಈ ಕಾನೂನನ್ನು ಮಂಗಳೂರು ವಿಮಾನ ನಿಲ್ದಾಣ ದಲ್ಲೂ ಜಾರಿಗೆ ತರುತ್ತೇವೆ ಎಂದು ವಿವರಿಸಿದರು.
ರಾಜ್ಯದ ಗ್ರಾಮಾಂತರದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ರಚನೆ ಆಗಿದೆ. ನಗರದ ವಾರ್ಡ್ ಮತ್ತು ಬೂತ್ ವಾರು ಟಾಸ್ಕ್ ಫೋರ್ಸ್ ಕಾರ್ಯಾಚರಣೆ ಮಾಡುತ್ತಿದೆ. ಹೊಸ ವ್ಯಕ್ತಿ ಅಥವಾ ಸೋಂಕಿತ ಬಂದಾಗ ವಿವರ ಸಂಗ್ರಹಿಸಲಾಗುವುದು. ರಾಜ್ಯದಲ್ಲಿ 10 ಲಕ್ಷ ಜನ ಸೋಂಕಿತರಾದರೂ ಕಟ್ಟೆಚ್ಚರ ವಹಿಸಬಹುದು ಎಂದು ಮಾಹಿತಿ ನೀಡಿದರು.
ನಮ್ಮಲ್ಲಿ ತಂತ್ರಜ್ಞಾನ ಸಿದ್ಧವಾಗಿದೆ. ಜನರ ನಡುವೆ ಕೊರೊನಾ ಕಳಂಕ ಬೇಡ. ವೈರಾಣುವಿನಿಂದ ದೂರವಿರಿ ವ್ಯಕ್ತಿಗಳಿಂದ ಅಲ್ಲ. ಹೊರ ರಾಜ್ಯದಿಂದ ಜನರನ್ನು ಕರೆದುಕೊಂಡು ಬರುವುದು ಸುಪ್ರೀಂ ಕೋರ್ಟ್ ಆದೇಶ. ಅದನ್ನು ನಾವು ಅನುಸರಿಸುತ್ತೇವೆ. ಆಯಾ ರಾಜ್ಯದವರು ಆ ರಾಜ್ಯಕ್ಕೆ ಬಿಟ್ಟುಕೊಳ್ಳಬೇಕಾಗುತ್ತದೆ ಎಂದರು.