ಚಾಮರಾಜನಗರ: ಜನತಾ ಕರ್ಫ್ಯೂ ನಿರೀಕ್ಷಿತ ಫಲ ನೀಡಿಲ್ಲ. ಕೊರೊನಾ ಚೈನ್ ಲಿಂಕ್ ತುಂಡರಿಸಬೇಕಾದರೆ ಲಾಕ್ಡೌನ್ ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕ್ಲೋಸ್ ಡೌನ್ನಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ. ಹಾಗಾಗಿ ಲಾಕ್ಡೌನ್ ಜಾರಿಯಾಗಬೇಕೆಂದು ಎಲ್ಲರೂ ಹೇಳುತ್ತಿದ್ದಾರೆ. ಇಂದು ಸಂಜೆ ಸಿಎಂ ಸಭೆ ಕರೆಯುತ್ತಿದ್ದಾರೆ. ಒಂದೆರೆಡು ದಿನಗಳಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಕಂಪ್ಲೀಟ್ ಲಾಕ್ಡೌನ್ ಪರಿಹಾರವಾದರೂ ಆದರಿಂದ ಆಗುವ ಸಾಧಕ, ಬಾಧಕಗಳನ್ನು ಚರ್ಚಿಸಬೇಕಿದೆ. ದುಡಿಮೆ ನಂಬಿರುವವರ ಬಗ್ಗೆಯೂ ಯೋಚಿಸಬೇಕಿದೆ. ಬೇರೆ ಜಿಲ್ಲೆಗಳಲ್ಲಿ ಈಗ ಲಾಕ್ಡೌನ್ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯ ಸ್ಥಿತಿ, ಅಂಕಿ-ಸಂಖ್ಯೆಗಳನ್ನು ಸಿಎಂ ಅವರಿಗೆ ತಿಳಿಸುತ್ತೇನೆ. ಕಳೆದ 24 ಗಂಟೆಗಳಲ್ಲಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 6 ಮಂದಿ ಕೊರೊನಾ ಸೋಂಕಿತರು ಹಾಗೂ ಇಬ್ಬರು ಕೊರೊನಾ ಲಕ್ಷಣಗಳಿರುವ ವ್ಯಕ್ತಿಗಳು ಸಾವವನ್ನಪ್ಪಿದ್ದಾರೆ.
ವೆಂಟಿಲೇಟರ್ನಲ್ಲಿರುವ 26 ಮಂದಿ ವರದಿ ನೋಡಿದೆ. ವೆಂಟಿಲೇಟರ್ನಲ್ಲಿದ್ದರೂ ಕೆಲವರ ಆಮ್ಲಜನಕದ ಮಟ್ಟ 60,70,80 ಇದೆ. ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿ. ಕೊರೊನಾ ಬಂದಾಗ ಆತಂಕ ಪಡದೆ ಆತ್ಮಸ್ಥೈರ್ಯ ಇರಲಿ ಜಿಲ್ಲೆಯ ಜನರಿಗೆ ಮನವಿ ಮಾಡಿದರು.ಸದ್ಯ ನಮ್ಮಲ್ಲಿ 200 ಜಂಬೋ ಸಿಲಿಂಡರ್, 700ಲೀ. ಲಿಕ್ವಿಡ್ ಆಕ್ಸಿಜನ್ ಇದೆ. 100 ಸಿಲಿಂಡರ್ ಮಧ್ಯಾಹ್ನದವರೆಗೆ ಬರಲಿದೆ. ಕೆಲ ಎಂಜಿನಿಯರ್ ತಂಡ ಬರಲಿದ್ದು, ಆಮ್ಲಜನಕ ಪ್ಲಾಂಟ್ ಕೂಡ ಚೆಕ್ ಮಾಡಲಿದ್ದಾರೆ. ಸಚಿವ ಸುಧಾಕರ್ ಭರವಸೆ ಕೊಟ್ಟಂತೆ 7 ಸಾವಿರ ಲೀ. ಲಿಕ್ವಿಡ್ ಆಕ್ಸಿಜನ್ ನಮಗೆ ಕೊಡಬೇಕೆಂದು ನೋಡಲ್ ಅಧಿಕಾರಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.