ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಶತಾಯ ಗತಾಯ ಹೋರಾಟ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಬೆನ್ನುಬಿಡದೇ ಕಾಡುತಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಡಿ ಜಯಗಳಿಸಿದ ಜಿಲ್ಲೆಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಪೂರ್ವ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಪಿ.ಬಿ.ಕಾಟೆ, ಎನ್.ಸಿ.ಪೂಜಾರ, ಗದಿಗೆಪ್ಪ ಕಿತ್ತೂರ ಅವರು ಕೊರೊನಾ ವೈರಸ್ ನಿಂದ ಗುಣಮುಖರಾಗಿ ಇಂದು ವೃತ್ತಿಗೆ ಆಗಮಿಸಿದ್ದು, ಎಲ್ಲರಲ್ಲಿಯೂ ಸಂತೋಷದ ವಾತಾವರಣ ನಿರ್ಮಾಣವಾಯಿತು.
ಈ ವೇಳೆ ಮಾತನಾಡಿದ ಗದಿಗೆಪ್ಪ ಕಿತ್ತೂರ, ಜನರು ಕೊರೊನಾ ವೈರಸ್ಗೆ ಹೆದರುವ ಅವಶ್ಯಕತೆ ಇಲ್ಲ. ಆದರೆ ಜಾಗರೂಕತೆಯಿಂದ ಜೀವನ ನಡೆಸಬೇಕಿದೆ. ಅಲ್ಲದೇ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಅತಿ ಅಗತ್ಯವಾಗಿದ್ದು, ಸ್ವಯಂ ರಕ್ಷಣೆ ಅತಿ ಅಗತ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್. ಎಸ್. ದೇಸಾಯಿ, ಎಸ್. ಎಂ.ಹಳ್ಳಕರ, ವಿ.ಎ.ಗುರವ, ನವೀನ ತುಪ್ಪಳಕಟ್ಟಿ ಸೇರಿದಂತೆ ಇತರರು ಇದ್ದರು.