– ಪರಿಹಾರ ಘೋಷಿಸದಿದ್ರೆ ಶೇ.25 ರಿಂದ 30 ಕೈಗಾರಿಕೆಗಳು ಸ್ತಬ್ಧ
ಬೆಂಗಳೂರು: ಕೊರೊನಾ ಲಾಕ್ಡೌನ್ ನಿಂದಾಗಿ ರಾಜ್ಯದಲ್ಲಿ 12 ರಿಂದ 15 ಲಕ್ಷದಷ್ಟು ಉದ್ಯೋಗ ನಷ್ಟವಾಗಿದೆ ಎಂದು ಕಾಸಿಯಾ ಅಧ್ಯಕ್ಷ ಅರಸಪ್ಪ ಹೇಳಿದ್ದಾರೆ.
ಕೋವಿಡ್ ಸಾಂಕ್ರಮಿಕವು ಇಡೀ ಆರ್ಥಿಕ ವ್ಯವಸ್ಥೆ ಮಧ್ಯಮ ಕಾರ್ಯಚಟುವಟಿಕೆಗಳನ್ನು ಕುಂಠಿತಗೊಳಿಸಿದೆ. ಲಾಕ್ಡೌನ್ ಸಂಪೂರ್ಣವಾಗಿ ತೆರವುಗೊಳಿಸಿದ ನಂತರವೂ ಸಣ್ಣ ಕೈಗಾರಿಕೆಗಳ ತೊಂದರೆಗಳಿಗೆ ಅಂತ್ಯವನ್ನು ಕಾಣಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ.
ರಾಜ್ಯಾದ್ಯಂತ ಸುಮಾರು 102 ಲಕ್ಷ ಕೊಟಿ ರೂ.ಗಳ ಹೂಡಿಕೆಯೊಂದಿಗೆ 8.75 ಲಕ್ಷ ಸೂಕ್ಷ್ಮ ಹಾಗೂ ಸಣ್ಣ ಕಾರ್ಯನಿರ್ವಹಿಸುತ್ತಿದೆ. 1.50 ಕೋಟಿಗೂ ಮೀರಿ ಉದ್ಯೋಗಗಳನ್ನು ಸೃಷ್ಟಿಸಿದೆ. ಹಿಂದಿನ ಲಾಕ್ಡೌನ್ ಕಾರಣದಿಂದಾಗಿ ಅಂದಾಜು ಶೇಕಡಾ 20 ರಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಈಗಾಗಲೇ ರಾಜ್ಯದಲ್ಲಿ ಮುಚ್ಚಲ್ಪಟ್ಟಿದೆ. ಸುಮಾರು 12 ರಿಂದ 15 ಲಕ್ಷ ಉದ್ಯೋಗ ನಷ್ಟ ಉಂಟಾಗಿರುವ ಬಗ್ಗೆ ಅಂದಾಜು ಮಾಡಲಾಗಿದೆ.
ಇನ್ನು ಎರಡನೆ ಅಲೆಯ ಲಾಕ್ಡೌನ್ ನ ಪರಿಣಾಮಗಳನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿರಲು ಸಾಧ್ಯವಾಗದ ಕಾರಣ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳು ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಿವೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸರ್ಕಾರ ಸೂಕ್ತ ಪರಿಹಾರಗಳನ್ನು ಘೋಷಿಸದೇ ಇದ್ದಲ್ಲಿ ಶೇಕಡ 25 ರಿಂದ 30 ರಷ್ಟು ಕೈಗಾರಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದಾದ ಸಾಧ್ಯತೆಗಳಿವೆ. ಸುಮಾರು 15 ರಿಂದ 20 ಲಕ್ಷ ಉದ್ಯೋಗ ನಷ್ಟ ಉಂಟಾಗುವ ಸಂಭವವಿದೆ ಎಂದು ಅರಸಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.