ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಈಗಾಗಲೇ ಮೊದಲ ಹೊಡೆತದಿಂದ ಚೇತರಿಸಿಕೊಂಡು ಬೆಳೆ ಬೆಳೆಯುತ್ತಿದ್ದ ರೈತರಿಗೆ ಇದೀಗ ಮತ್ತೆ ಎರಡನೇ ಅಲೆಯ ಬರೆ ಬೀಳತೊಡಗಿದೆ.
ಕಷ್ಟಪಟ್ಟು ಬೆಳೆದಿದ್ದ ಕೊತ್ತಂಬರಿ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಈ ಮೂಲಮ ಕೇಳೋರೇ ಇಲ್ಲ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಹನುಮಂತಪುರ ಗ್ರಾಮದ ರೈತ ನಾರಾಯಣಸ್ವಾಮಿ ಎಂವರು ತಾವು ಬೆಳೆದಿದ್ದ ಕೊತ್ತಂಬರಿ ಸೊಪ್ಪನ್ನು ದನಗಳಿಗೆ ನೀಡಿದ್ದಾರೆ.
ತಲಾ 200-300 ರೂ. ಕೂಲಿ ಕೊಟ್ಟು ಕೊತ್ತಂಬರಿ ಸೊಪ್ಪು ಕಟಾವು ಮಾಡಿಕೊಂಡು ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೆ 1 ರೂ.ಗೂ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಬಿಕರಿಯಾಗ್ತಿಲ್ಲವಂತೆ. ಇದರಿಂದ ನೊಂದ ರೈತ, ಇಡೀ ಕೊತ್ತಂಬರಿ ಸೊಪ್ಪನ್ನ ದನಗಳಿಗೆ ನೀಡಿದ್ದಾರೆ. ಅದೇ ರೀತಿ ಇದೀಗ ಗ್ರಾಮಸ್ಥರು ಕೂಡ ಕೊತ್ತಂಬರಿ ಸೊಪ್ಪನ್ನ ಕಟಾವು ಮಾಡಿಕೊಂಡು ದನಗಳಿಗೆ ಹಾಕ್ತಿದ್ದಾರೆ.
1 ಎಕರೆಯಲ್ಲಿ 50000 ಖರ್ಚು ಮಾಡಿ ಕೊತ್ತಂಬರಿ ಸೊಪ್ಪು ಬೆಳೆಯಲಾಗಿತ್ತು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪು 30 ರಿಂದ 40, 50 ರೂಪಾಯಿ ಬಿಕರಿಯಾಗ್ತಿತ್ತು. ಆದರೆ ಈಗ ಒಂದು ಕಟ್ಟು 1 ರೂಪಾಯಿಗೂ ಕೇಳೋರಿಲ್ಲ. 20 ಕೆಜಿ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಟ್ಯಾಂಕರ್ ನೀರು ಹರಿಸಿ ಎರಡು ತಿಂಗಳು ಶ್ರಮ ಹಾಕಿ ಬೆಳೆದಿದ್ದ ಕೊತ್ತಂಬರಿ ಸೊಪ್ಪಿನಿಂದ ಈಗ ನಯಾ ಪಯಸೆ ಆದಾಯವೂ ಬಂದಿಲ್ಲ ಅಂತ ರೈತ ಮಹಿಳೆ ಚೆನ್ನಮ್ಮ ಅಳಲು ತೋಡಿಕೊಳ್ತಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಮೊದಲ ಹೊಡೆತದಿಂದ ತತ್ತರಿಸಿದ್ದ ರೈತರು ಚೇತರಿಸಿಕೊಳ್ಳುತ್ತಿರುವಾಗಲೇ ಈಗ ಎರಡನೇ ಅಲೆ ಆರಂಭದಲ್ಲೇ ಇತರೆ ರಾಜ್ಯಗಳಿಗೆ ರಫ್ತು ಮಾಡಲಾಗದೆ. ತರಕಾರಿಗಳ ಬೆಲೆ ತೀರಾ ಕೆಳಮಟ್ಟಕ್ಕೆ ಕುಸಿದಿದ್ದು ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.