– ಪಬ್ಲಿಕ್ ಟಿವಿಯಲ್ಲಿ ಸರ್ಕಾರಿ ಸಮೀಕ್ಷೆಯ ಇನ್ಸೈಡ್ ಮಾಹಿತಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ನಿಯಂತ್ರಣಕ್ಕೆ ಬರೋ ಯಾವ ಮುನ್ಸೂಚನೆಯೂ ಕಾಣಿಸುತ್ತಿಲ್ಲ. ಆದ್ರೆ ಸರ್ಕಾರವೇನೋ ಸೆಪ್ಟೆಂಬರ್ನಲ್ಲಿ ಶಾಲೆ ಆರಂಭಿಸೋ ಸುಳಿವು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜೂನ್ 10ರಿಂದ 20ರ ತನಕ ಪೋಷಕರ ಸಭೆ ನಡೆಸಿ, ಶಾಲೆ ಓಪನ್ ಕುರಿತಂತೆ ಅಭಿಪ್ರಾಯ ಸಂಗ್ರಹಿಸಿತ್ತು. ಸರ್ಕಾರ ನಡೆಸಿದ ಈ ಸಮೀಕ್ಷೆಯ ಇನ್ಸೈಡ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯ ಆಗಿದೆ.
ಇದು ಸರ್ಕಾರದ ವರದಿಯೂ ಅಲ್ಲ. ಎಲ್ಲಾ ಜಿಲ್ಲೆಗಳ ನಮ್ಮ ಪ್ರತಿನಿಧಿಗಳು ಬಹುತೇಕ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು, ಎಸ್ಡಿಎಂಸಿಗಳನ್ನು ಸಂಪರ್ಕಿಸಿ, ಮಾಹಿತಿ ಸಂಗ್ರಹಿಸಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದೆ. ಪಬ್ಲಿಕ್ ಟಿವಿಗೆ ಲಭ್ಯವಾದ ಈ ಮಾಹಿತಿಯನ್ನು ಅವಲೋಕಿಸಿದಲ್ಲಿ ಬಹುತೇಕ ಪೋಷಕರು ಕೊರೊನಾ ವೇಳೆ ತಮ್ಮ ಮಕ್ಕಳ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಇದನ್ನೆಲ್ಲಾ ನೋಡ್ತಾ ಇದ್ರೆ ಈ ವರ್ಷ ಶೂನ್ಯ ಶೈಕ್ಷಣಿಕ ವರ್ಷವಾಗಿ ಮಾರ್ಪಡುತ್ತಾ ಎಂಬ ಪ್ರಶ್ನೆ ಏಳುತ್ತದೆ. ಕನಿಷ್ಠ ಒಂದರಿಂದ ಐದನೇ ತರಗತಿವರೆಗೆ ಈ ಬಾರಿ ಶೂನ್ಯ ಶೈಕ್ಷಣಿಕ ವರ್ಷ ಆಗಬಹುದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ.
ಪೋಷಕರಿಗೆ ಸರ್ಕಾರ ಕೇಳಿದ 3 ಪ್ರಶ್ನೆ
ಪ್ರಶ್ನೆ 1 – ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಹಿಂದಿನಂತೆ ತರಗತಿ ಪ್ರಾರಂಭಿಸಬಹುದೇ?
ಪ್ರಶ್ನೆ 2 – ಶಿಫ್ಟ್ ಲೆಕ್ಕದಲ್ಲಿ ತರಗತಿಗಳನ್ನು ಪ್ರಾರಂಭಿಸಬಹುದೇ?
ಪ್ರಶ್ನೆ 3 – ದಿನ ಬಿಟ್ಟು ದಿನ ತರಗತಿಗಳನ್ನು ಪ್ರಾರಂಭಿಸಬಹುದೇ?
ಸರ್ಕಾರ ಕೇಳಿದ ಈ ಪ್ರಶ್ನೆಗಳಿಗೆ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಪ್ರಮುಖವಾಗಿ 4 ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳ ಮಕ್ಕಳ ಪೋಷಕರ 4 ಅಭಿಪ್ರಾಯ
ಅಭಿಪ್ರಾಯ 1- ಸ್ಕೂಲಿಗೆ ಕಳುಹಿಸೋದಿಲ್ಲ (ಶೇ.82ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಅಂದಿದ್ದಾರೆ)
ಅಭಿಪ್ರಾಯ 2- ಪೋಷಕರಿಗೆ ದ್ವಂದ್ವ (ಶೇ.82ರಷ್ಟು ಪೋಷಕರು ಬೇಡ ಅಂದರೂ, ಇನ್ನುಳಿದವರಿಗೆ ಗೊಂದಲ)
ಅಭಿಪ್ರಾಯ 3- 5ನೇ ಕ್ಲಾಸ್ವರೆಗೆ ಮಕ್ಕಳನ್ನು ಕಳಿಸಲ್ಲ. (ಕೊರೊನಾ ಕಡಿಮೆ ಆಗಬೇಕು ಅಥವಾ ಲಸಿಕೆ ಕಂಡುಹಿಡಿಯಬೇಕು)
ಅಭಿಪ್ರಾಯ 4- 6ನೇ ಕ್ಲಾಸ್ನವರಿಗೆ ಮಾಡಲಿ. (6-10 ನೇ ತರಗತಿ ಆಗಸ್ಟ್ ನಂತರ ಬೇಕಾದ್ರೆ ಪರಿಸ್ಥಿತಿ ನೋಡಿಕೊಂಡು ತರಗತಿ ಪ್ರಾರಂಭ ಮಾಡಲಿ.)
ಖಾಸಗಿ ಶಾಲೆಗಳು: ಕೊರೊನಾ ಸಮಯದಲ್ಲಿ ಶಾಲೆ ಪ್ರಾರಂಭಿಸಲು ಮುಂದಾದ್ರೆ ನಮ್ಮ ಬೇಡಿಕೆಗಳನ್ನು ಆಲಿಸಬೇಕು. ಪ್ರಮುಖವಾಗಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಮೂರು ಬೇಡಿಕೆಗಳನ್ನು ಸರ್ಕಾರ ಮತ್ತು ಶಾಲಾ ಆಡಳಿತ ಮಂಡಳಿ ಮುಂದಿಟ್ಟಿದ್ದಾರೆ.
ಬೇಡಿಕೆ 1: ಶಾಲೆಗಳ ಆರಂಭಕ್ಕೆ ಮೊದಲು ಮಾರ್ಗಸೂಚಿಗಳನ್ನು ನೀಡಿ
ಬೇಡಿಕೆ 2: ಮಾರ್ಗಸೂಚಿಗಳ ಪಾಲನೆ ಬಗ್ಗೆ ನಿಗಾ ವಹಿಸಬೇಕು
ಬೇಡಿಕೆ 3: ಶಾಲೆಗೆ ಕಳುಹಿಸಿದ ಮೇಲೆ ಮಕ್ಕಳ ಸಂಪೂರ್ಣ ಜವಾಬ್ದಾರಿ ಸರ್ಕಾರವೇ ತೆಗೆದುಕೊಳ್ಳಬೇಕು.
ಸರ್ಕಾರಿ ಶಾಲೆಗಳು: ಖಾಸಗಿ ಶಾಲೆ ಮಕ್ಕಳ ಅಭಿಪ್ರಾಯ ಒಂದಾದ್ರೆ, ಸರ್ಕಾರಿ ಶಾಲೆಯ ಮಕ್ಕಳ ಪೋಷಕರು ಕೆಲವೊಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
1. ಕೊರೋನಾ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಶೇ.80ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಅಂದಿದ್ದಾರೆ. ಕೇವಲ 20ರಷ್ಟು ಪೋಷಕರು ಗೊಂದಲದಲ್ಲಿದ್ದಾರೆ.
2. ಪಾಳಿ ಪದ್ಧತಿ (ಶಿಫ್ಟ್), ದಿನ ಬಿಟ್ಟು ದಿನ ತರಗತಿ ನಡೆಸಿದರೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ.
3. ಕೊರೊನಾ ಕಡಿಮೆಯಾದ ಮೇಲೆ ಅಥವಾ ಲಸಿಕೆ ಕಂಡು ಹಿಡಿದ ಮೇಲೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಮಕ್ಕಳ ಪೋಷಕರು, ಶಾಲೆ ಆರಂಭಕ್ಕೆ ಸರ್ಕಾರದ ಮುಂದೆ ಐದು ಷರತ್ತುಗಳನ್ನು ಹಾಕಿದ್ದಾರೆ.
1. ಶಾಲೆ ಪ್ರಾರಂಭಿಸಿದ್ರೆ ಮಕ್ಕಳಿಗೆ ಸರ್ಕಾರವೇ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು.
2. ಮಕ್ಕಳಿಗೆ ಏನೇ ತೊಂದರೆಯಾದರೂ ಸರ್ಕಾರವೇ ಜವಾಬ್ದಾರಿ ಹೊತ್ತುಕೊಳ್ಳಬೇಕು.
3. ನಿತ್ಯ ಶಾಲಾ ಕೊಠಡಿಗಳನ್ನ, ಶೌಚಾಲಯಗಳನ್ನ ಶುಚಿಯಾಗಿ ಇಟ್ಟುಕೊಳ್ಳಬೇಕು.
4. ಮಕ್ಕಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಆರೋಗ್ಯ ತಪಾಸಣೆ ಮಾಡಬೇಕು.
5. ನಿತ್ಯವೂ ಮಕ್ಕಳ ಆರೋಗ್ಯದ ಬಗ್ಗೆ ತಪಾಸಣೆ ಮಾಡಬೇಕು.
ಸರ್ಕಾರಿ, ಖಾಸಗಿ ಮಕ್ಕಳ ಪೇರೆಂಟ್ಸ್ ಶಾಲೆ ಆರಂಭಕ್ಕೆ ‘ರೆಡ್’ ಸಿಗ್ನಲ್ ತೋರಿದ್ದಾರೆ. ಆದ್ರೆ ಇವರಿಗಿಂತ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿರೋದು ನಿತ್ಯ ಕೆಲಸಕ್ಕೆ ಹೋಗೋ ಪೋಷಕರು. ಅವರು ಸಹ ಕೆಲ ಸಲಹೆಗಳನ್ನು ನೀಡಿದ್ದಾರೆ.
1. ಆಗಸ್ಟ್ ನಂತರ ಪರಿಸ್ಥಿತಿ ನೋಡಿಕೊಂಡು ಶಾಲೆ ಪ್ರಾರಂಭಿಸಲು ಬಹುತೇಕ ಪೋಷಕರ ಸಲಹೆ.
2. ಶಿಫ್ಟ್ ವ್ಯವಸ್ಥೆಗಿಂತ ದಿನ ಬಿಟ್ಟು ದಿನ ಶಾಲೆ ನಡೆಸಿದ್ರೆ ಒಳ್ಳೆಯದು ಎಂದು ಸಲಹೆ.
3. ಮಕ್ಕಳ ಜವಾಬ್ದಾರಿ ಸರ್ಕಾರ ಹೊರಬೇಕು. ಮಾಸ್ಕ್, ಗ್ಲೌಸ್ ನೀಡಬೇಕು.
ಫೈನಲ್ ರಿಪೋರ್ಟ್
1. ಶಾಲೆ ಪ್ರಾರಂಭಕ್ಕೆ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಬಹುತೇಕ ಪೋಷಕರ ವಿರೋಧ.
2. ಕೊರೊನಾ ಲಸಿಕೆ ಬರುವವರೆಗೂ, ಶಾಲೆಗಳನ್ನು ಆರಂಭಿಸುವುದು ಬೇಡ.
3. ಕೊರೊನಾ ಕಡಿಮೆಯಾದ ನಂತರವಷ್ಟೇ ಶಾಲೆಗಳನ್ನು ಆರಂಭಿಸಿ.